ಇಂದು ಹಿಂದೆಂದಿಗಿಂತಲೂ ಡಿಜಿಟಿಲ್ ತಂತ್ರಜ್ಞಾನಗಳ ಮೇಲೆ ಹೆಚ್ಚು ಅವಲಂಭಿತರಾಗಿದ್ದೇವೆ. ಈ ಅವಲಂಬನೆಯು ನಮಗೆ ಆಹಾರ ಭದ್ರತೆಯನ್ನು ಒದಗಿಸುವ ಸಣ್ಣ ಹಾಗೂ ಮಧ್ಯಮ ಕೃಷಿ ಸಮುದಾಯಗಳನ್ನು ಅಂಚಿಗೆ ಸರಿಸಬಾರದು. GEAGನವರು DST ಸಹಯೋಗದೊಂದಿಗೆ ೧೨೦೦ ಸಣ್ಣ ರೈತರು ಹವಾಮಾನ ವೈಪರೀತ್ಯಗಳ ನಡುವೆಯೂ ಡಿಜಿಟಲ್ ತಂತ್ರಜ್ಞಾನಗಳ ನೆರವಿನಿಂದ ಕೃಷಿಯನ್ನು ಕೈಗೊಳ್ಳುವಂತೆ ಮಾಡಿದ್ದಾರೆ.
ಆತ್ಮನಿರ್ಭರ ಭಾರತದ ಗುರಿಯನ್ನು ತಲುಪಲು ಹವಾಮಾನ ವೈಪರಿತ್ಯಗಳನ್ನು ತಾಳಿಕೊಂಡು ಕೃಷಿಯನ್ನು ಮಾಡುವುದು ಬಹುದೊಡ್ಡ ಸವಾಲು. ಪ್ರವಾಹ, ಜಲಾವೃತ ಪರಿಸ್ಥಿತಿಯಿಂದಾಗಿ ಉತ್ತರ ಪ್ರದೇಶ, ಉತ್ತರ ಬಿಹಾರಗಳಲ್ಲಿನ ಮಿಲಿಯನ್ಗಟ್ಟಲೇ ಸಣ್ಣ ಹಾಗೂ ಮಧ್ಯಮ ರೈತರು ತಮ್ಮ ಭೂಮಿ ಹಾಗೂ ಮನೆಯನ್ನು ಕಳೆದುಕೊಂಡಿದ್ದಾರೆ. ಹವಾಮಾನ ಬದಲಾವಣೆ, ಪ್ರವಾಹ, ಅತಿವೃಷ್ಟಿ, ಅನಾವೃಷ್ಟಿ, ಬರ, ಕೀಟ ಭಾದೆ, ರೋಗ ಬಾಧೆಗಳು ಈ ಪ್ರದೇಶವನ್ನು ನಿರಂತರವಾಗಿ ಕಾಡುತ್ತಿವೆ. ಇದರಿಂದಾಗಿ ಕೃಷಿ ಸಮುದಾಯದ ಬಹುಭಾಗವು ಸಬ್ಸಿಡಿಗಳು, ನಷ್ಟ ಪರಿಹಾರಗಳನ್ನೇ ಅವಲಂಭಿಸಬೇಕಾಗಿದೆ.

ತನ್ನ ಮೊಬೈಲಿನಲ್ಲಿ ಹವಾಮಾನ ಮಾಹಿತಿಯನ್ನು ಪಡೆಯುತ್ತಿರುವ ರೈತ
ಹವಾಮಾನ ವೈಪರಿತ್ಯಗಳು ಹಾಗೂ ಕೃಷಿಯ ಮೇಲೆ ಅದರ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ಇದರಿಂದ ತೊಂದರೆಗೊಳಗಾದ ಜನರನ್ನು ಕೃಷಿ ಸಲಹಗಾರರು ಹಾಗೂ ವಾಸ್ತವಿಕ ಸಲಹೆಗಳೊಂದಿಗೆ ಭೇಟಿಯಾಗಬೇಕು. ಪ್ರವಾಹದಂತಹ ಪರಿಸ್ಥಿತಿಯಲ್ಲಿ ಈ ಜನರನ್ನು ಸಾಂಪ್ರದಾಯಿಕ ಮಾದರಿಯಲ್ಲಿ ಭೇಟಿಯಾಗುವುದು ದೊಡ್ಡ ಸವಾಲು. ಆದ್ದರಿಂದ ಇಂತಹ ಪರಿಸ್ಥಿತಿಗಳಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಸಂವಹನದ ಮಾಧ್ಯಮವಾಗಿ ಬಳಸಲಾಯಿತು.
ಇಂದು ಹಳ್ಳಿಗಳಲ್ಲಿನ ಬಹುತೇಕ ರೈತರ ಬಳಿ ಮೊಬೈಲ್ ಫೋನುಗಳಿವೆ. ಅವರು ಕೃಷಿ ಸಂಬಂಧಿ ಸಲಹೆಯನ್ನು ಸಂದೇಶ ಇಲ್ಲವೇ ಧ್ವನಿ ಸಂದೇಶದ ಮೂಲಕ ಅಂತರ್ಜಾಲ ಸೌಲಭ್ಯವಿಲ್ಲದೆಯೂ ಪಡೆಯಬಹುದು. ಸ್ಮಾರ್ಟ್ ಫೋನುಗಳ ಮೂಲಕ ರೈತರು ಹವಾಮಾನ ಹಾಗೂ ಪ್ರತಿಕೂಲ ಸನ್ನಿವೇಶಗಳ ಕುರಿತು ಮಾಹಿತಿ ಪಡೆಯುವುದರಿಂದ ಆ ಸಮಯಕ್ಕೆ ತಕ್ಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲವಾಗುತ್ತದೆ. ಆಪತ್ತಿನ ನಿರ್ವಹಣೆ ಇದರಿಂದ ಸಾಧ್ಯವಾಗುತ್ತದೆ. ಸೀಮಿತ ಸಂಪನ್ಮೂಲ, ಕನಿಷ್ಟ ವೆಚ್ಚದೊಂದಿಗೆ ಬೆಳೆ ಹಾಗೂ ಜಾನುವಾರು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ.
ಕೈಗೊಳ್ಳಲಾದ ಕ್ರಮಗಳು
೨೦೧೮ರಲ್ಲಿ ಗೋರಖ್ಪುರ್ ಎನ್ವಿರಾನ್ಮೆಂಟಲ್ ಆಕ್ಷನ್ ಗ್ರೂಪ್ನವರು(GEAG) ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಹವಾಮಾನ ತಾಳಿಕೆ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಗೋರಖ್ಪುರ ಹಾಗೂ ಪಶ್ಚಿಮ ಚಂಪಾರಣ್ಯದ ಸುಮಾರು ೧೦,೦೦೦ ಸಣ್ಣ ಹಾಗೂ ಮಧ್ಯಮ ರೈತರಿಗಾಗಿ ಕಾರ್ಯಕ್ರಮವೊಂದನ್ನು ರೂಪಿಸಿತು. ಹವಾಮಾನ ತಾಳಿಕೆಯ ತಂತ್ರಜ್ಞಾನವು ಪ್ರವಾಹ ತಾಳಿಕೆ, ಸಣ್ಣ ತೋಟದ ಯಾಂತ್ರೀಕರಣ, ಸಮರ್ಥ ನೀರಾವರಿ ವ್ಯವಸ್ಥೆಯ ಅಭಿವೃದ್ಧಿ, ಜೈವಿಕ ಗೊಬ್ಬರ ಬಳಕೆಯ ಮೂಲಕ ಮಣ್ಣಿನ ಪೌಷ್ಟಿಕಾಂಶ ಹೆಚ್ಚಳ, ಕೃಷಿ ಪದ್ಧತಿಗಳಲ್ಲಿ ತಂತ್ರಜ್ಞಾನ ಅಳವಡಿಕೆಗಳನ್ನು ಒಳಗೊಂಡಿತ್ತು.
GEAG ಎರಡು ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು(AWS) ಸ್ಥಾಪಿಸಿತು. ಗೋರಖ್ಪುರದ ಮೊಹಂಗ್ನಲ್ಲೊಂದು ಪಶ್ಚಿಮ ಚಂಪಾರಣ್ನ ಜಮುನಿಯಾದಲ್ಲಿ ಮತ್ತೊಂದು. ಇದರೊಂದಿಗೆ ಗೋರಖ್ಪುರದ ಪಚ್ಗವಾನ್, ಧರ್ಮಪುರ್, ಜಿಂದಾಪುರ್, ಲೋಹರ್ಪುರ್ವಾಗಳಲ್ಲಿ ಮತ್ತು ಪಶ್ಚಿಮ ಚಂಪಾರಣ್ಯದ ಬೈಕುಂತ್ವಾದಲ್ಲಿ ಐದು ಮಳೆಮಾಪನ ಕೇಂದ್ರಗಳನ್ನು ಸ್ಥಾಪಿಸಿದೆ. AWS ಮತ್ತು ಮಳೆಮಾಪನ ಕೇಂದ್ರಗಳ ಹವಾಮಾನ ಮಾಹಿತಿಯನ್ನು ಮೂರು ಹಂತಗಳ ಪ್ರಕ್ರಿಯೆಯ ಮೂಲಕ ಪಡೆಯಲಾಗುತ್ತದೆ – (ಅ) ಮಾಹಿತಿ ಸಂಸ್ಕರಣ (ಆ) ಗುಣಮಟ್ಟ ನಿಯಂತ್ರಣ (ಇ) ವಸ್ತುನಿಷ್ಠ ವಿಶ್ಲೇಷಣೆ.
ಸ್ಥಳೀಯ IMD ಕಛೇರಿಯು ಆ ಪ್ರದೇಶದ ಅಲ್ಪಾವರಣ ವಾಯುಗುಣವನ್ನು ಅಲ್ಲಿನ ಹವಾಮಾನ ದತ್ತಾಂಶವನ್ನು ನೀಡುವ ಮೂಲಕ GEAGಗೆ ಸಹಾಯ ಮಾಡುತ್ತದೆ. ಹವಾಮಾನ ಮುನ್ಸೂಚನೆ ಮಾಹಿತಿ ಹಾಗೂ ಮಾದರಿಗಳನ್ನು IMD ಇಂದ ಸಂಗ್ರಹಿಸಲಾಗುವುದು. ಗಣಿತದ ಮಾದರಿಗಳನ್ನಾಧರಿಸಿದ ವಿಧಾನದ ಮೂಲಕ ಈ ಮಾಹಿತಿಗಳನ್ನು ಬ್ಲಾಕ್ ಮಟ್ಟ ಹಾಗೂ AWSನಿಂದ ಸಂಗ್ರಹಿಸಿದ ಮಾಹಿತಿ ಮತ್ತು ವಿವಿಧ ಪ್ರದೇಶಗಳಲ್ಲಿನ ಮಳೆ ಮಾಪನ ಕೇಂದ್ರದಿಂದ ಪಡೆಯಲಾಗುವ ವಿವರ ಎಲ್ಲವನ್ನೂ ಒಟ್ಟುಗೂಡಿಸಲಾಗುವುದು. ಹವಾಮಾನ ಕುರಿತ ಸಲಹೆಯನ್ನು ನೀಡುವ ಮೊದಲು GEAGನ ವಿಷಯ ಪರಿಣಿತರು ಇವೆಲ್ಲ ಅಂಶಗಳೊಂದಿಗೆ ಆ ಪ್ರದೇಶದ ಸುತ್ತಲಿನ ಸಂದರ್ಭವನ್ನು ಗಮನದಲ್ಲಿಟ್ಟುಕೊಂಡು ಅದಕ್ಕನುಗುಣವಾಗಿ ಮುನ್ಸೂಚನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಸಲಹೆಯನ್ನು ನೀಡುತ್ತಾರೆ.
“ಪ್ರತಿದಿನ ನನ್ನ ತೋಟದಲ್ಲಿ ಕೆಲಸ ಮಾಡುವಾಗ ಹವಾಮಾನ ವೈಪರಿತ್ಯವು ಬೆಳೆಯ ಬೆಳವಣಿಗೆ, ಕೀಟಬಾಧೆ ಅಥವ ಬೆಳೆ ನಷ್ಟದ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ಗಮನಿಸುತ್ತೇನೆ. ಏನಾದರೂ ಸಂದೇಹಗಳಿದ್ದಲ್ಲಿ ನನ್ನ ಸ್ಮಾರ್ಟ್ಫೋನ್ ಮೂಲಕ GEAGನ ಸಿಬ್ಬಂದಿಗಳೊಂದಿಗೆ ಮಾತಾಡುತ್ತೇನೆ. ಕೆಲವೇ ಕ್ಷಣಗಳಲ್ಲಿ ಅವರು ಸಲಹೆಯನ್ನು ನೀಡುತ್ತಾರೆ” ಎಂದು ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ಭೂಯಿಧರಪುರ ಹಳ್ಳಿಯ ಜಂಗಲ್ ಕೌಡಿಯಾದ ದುರ್ಗೇಶ್ ಕೌಡಿಯ ಎನ್ನುವ ಮಾದರಿ ಯುವರೈತ ಹೇಳುತ್ತಾನೆ.
GEAG ಸ್ಮಾರ್ಟ್ಫೋನ್ ತಂತ್ರಜ್ಞಾನದ ಅನುಕೂಲತೆಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಹವಾಮಾನ ಮತ್ತು ಕೃಷಿ ಸಂಬಂಧಿ ಸಲಹೆಗಳನ್ನು ಅವರ ಮನೆಬಾಗಿಲಿಗೆ ತಲುಪಿಸುತ್ತಿದೆ. ಸ್ಥಳೀಯ ಐಎಂಡಿ ಕಛೇರಿ, ಅಯೋಧ್ಯೆಯಲ್ಲಿನ ನರೇಂದ್ರ ಡಿಯೋ ಕೃಷಿ ವಿವಿಯ ಸಹಯೋಗದೊಂದಿಗೆ GEAG ರೆಡಾರ್, ಉಪಗ್ರಹ ಆಧಾರಿತ ಹವಾಮಾನಮಾಹಿತಿಗಳನ್ನು ಕೂಲಂಕುಷವಾಗಿ ಪರೀಶೀಲಿಸಿ ರೈತರಿಗೆ ಬೆಳೆ ಬೆಳವಣಿಗೆ ಕುರಿತಂತೆ ಸಲಹೆಗಳನ್ನು ಒದಗಿಸುತ್ತದೆ.
ವಿಷಯ ಮತ್ತು ಪ್ರಸರಣ
ಕೃಷಿ ಸಲಹೆಗಾಗಿ GEAGನ ಸಿಬ್ಬಂದಿಗಳು ಸ್ಮಾರ್ಟ್ ಹವಾಮಾನ ಸಲಹಾ ಮಾದರಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಕಾಲಕ್ಕನುಗುಣವಾದ ಎಲ್ಲ ಮುಖ್ಯ ಬೆಳೆಗಳನ್ನು ಒಳಗೊಂಡಿದೆ. ಇದು ರಾಜ್ಯದ ಸಂಶೋಧನ ಕೇಂದ್ರಗಳಲ್ಲಿನ ಕೃಷಿ ಪರಿಣತರು ನೀಡುವ ತಾಂತ್ರಿಕ ಸಲಹೆಗಳನ್ನು ಒಳಗೊಳ್ಳುತ್ತದೆ. ಪರಿಸರಾತ್ಮಕ ಸಿದ್ಧಾಂತಗಳನ್ನು ಆಧರಿಸಿ ಹೆಚ್ಚಿನ ಒಳಸುರಿಯುವಿಕೆಯನ್ನು ಬೇಡದ ಕೃಷಿ ಸಲಹೆಗಳನ್ನು ನೀಡಲು ಆದ್ಯತೆ ನೀಡಲಾಗುತ್ತದೆ. ಈ ಮಾಹಿತಿಯನ್ನು ಒಗ್ಗೂಡಿಸಿ GEAG ಹವಾಮಾನ ಆಧಾರಿತ ಕೃಷಿ ಸಲಹೆಯನ್ನು ರೈತರಿಗೆ ಹಿಂದಿಯಲ್ಲಿ ಕಳಿಸಿಕೊಡುತ್ತದೆ. ಇದು ಸುಸ್ಥಿರ ಕೃಷಿ ಪದ್ಧತಿಗಳನ್ನಾಧರಿಸಿದ ಮುನ್ಸೂಚನೆ ಹಾಗೂ ಪರಿಹಾರ ಕ್ರಮಗಳನ್ನು ಒಳಗೊಂಡಿರುತ್ತದೆ.
ಸ್ಮಾರ್ಟ್ಫೋನ್ ಆಧಾರಿಸಿದ ಡಿಜಿಟಲ್ ಕಾರ್ಯಕ್ರಮದ ಮೂಲಕ ರೈತರಿಗೆ ಹವಾಮಾನ ಮುನ್ಸೂಚನೆಯನ್ನು ತಿಳಿಸಲಾಗುತ್ತದೆ. ಮಳೆಯ ಸಾಧ್ಯತೆ (ಕನಿಷ್ಠ -ಗರಿಷ್ಠ), ಉಷ್ಣಾಂಶ (ಕನಿಷ್ಠ/ಗರಿಷ್ಠ/ ಇನ್ನಿತರ), ಗರಿಷ್ಠ/ಕನಿಷ್ಠ ಆರ್ದ್ರತೆ/ತೇವಾಂಶ, ಮೋಡಗಳ ದಿಕ್ಕು, ಗಾಳಿಯ ದಿಕ್ಕು/ವೇಗಗಳಿಗೆ ಸಂಬಂಧಿಸಿದಂತೆ ಮುಂದಿನ ಐದು ದಿನಗಳ ಮಾಹಿತಿಯನ್ನು ನೀಡುತ್ತದೆ. ಜೊತೆಗೆ ಖಾರಿಫ್, ರಾಬಿ, ಜಯಾದ್ ಬೆಳೆಗಳನ್ನು ಬಿತ್ತಲು ಸೂಕ್ತ ಸಮಯ, ನೀರಾವರಿ, ಗೊಬ್ಬರ ಹಾಗೂ ಕೀಟನಾಶಕಗಳ ಸಿಂಪಡಣೆ, ಕೊಯ್ಲು ಮತ್ತು ಜಾನುವಾರುಗಳಿಗೆ ಹಾಕಿಸಬೇಕಾದ ಲಸಿಕೆ ಇವೆಲ್ಲವುಗಳ ಮಾಹಿತಿಯನ್ನು ನೀಡುತ್ತದೆ. ಪ್ರಮುಖ ಬೆಳೆಗಳನ್ನು ಬಿತ್ತಬೇಕಾದ ಸಮಯವನ್ನು ಮುಂದಕ್ಕೆ ಇಲ್ಲವೇ ಮುಂಚಿತವಾಗಿ ಮಾಡಬೇಕಿದ್ದಲ್ಲಿ, ಯಾವುದನ್ನು ಬಿತ್ತಬೇಕು ಎನ್ನುವುದರ ಕುರಿತು ರೈತರಿಗೆ ಸೂಚನೆ ನೀಡುತ್ತದೆ. ಬೆಳೆಯ ವಿವಿಧ ಹಂತಗಳಲ್ಲಿ ಅದಕ್ಕೆ ಕಾಡಬಹುದಾದ ರೋಗಗಳು ಅದಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು, ಜಾನುವಾರುಗಳ ಆರೈಕೆ ಈ ಕುರಿತು ಕೂಡ ಮಾಹಿತಿ ಒದಗಿಸುತ್ತದೆ.
ಅಂತರ್ಜಾ೦ಲ ಆಧಾರಿತ ವೇದಿಕೆಯ ಮೂಲಕ ೫ ದಿನಗಳ ಅಂತರದಲ್ಲಿ ಈ ಬಗೆಯ ಆರು ಸಲಹಾ ಸಂದೇಶಗಳನ್ನು ರೈತರಿಗೆ ಮತ್ತು ಡಿಎಸ್ಟಿ ಕ್ಷೇತ್ರ ಸಿಬ್ಬಂದಿಗಳ ಫೋನುಗಳಿಗೆ ಕಳುಹಿಸಲಾಗುವುದು. ಹೆಚ್ಚು ರೈತರಿಗೆ ಇದು ತಲುಪಲಿ ಎನ್ನುವ ಉದ್ದೇಶದಿಂದ ಡಿಎಸ್ಟಿ ಕ್ಷೇತ್ರ ಸಿಬ್ಬಂದಿಗಳು ಈ ಸಲಹೆಗಳನ್ನು ಕೃಷಿ ಸೇವಾ ಕೇಂದ್ರದ ಹೊರಗಿರುವ ಬೋರ್ಡಿನ ಮೇಲೆ ಹಾಕಿರುತ್ತಾರೆ. ಕೇಂದ್ರಕ್ಕೆ ಬರುವ ರೈತರು ಇವುಗಳನ್ನು ನೋಡುತ್ತಾರೆ.
ಇದು ರೈತರಿಗೆ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಕುರಿತು ಮುಂಚಿತವಾಗಿ ತಿಳಿಸುತ್ತದೆ. ಹವಾಮಾನ ಮುನ್ಸೂಚನೆಯ ಆಧಾರದ ಮೇಲೆ ತಕ್ಷಣ ಕೈಗೊಳ್ಳಬೇಕಾದ ನಿರ್ಧಾರಗಳ ಕುರಿತು ಮಾರ್ಗದರ್ಶನ ನೀಡುತ್ತದೆ. ಜೊತೆಗೆ ಇದರಿಂದಾಗಿ ಬೆಳೆ ಹಾನಿ ತಪ್ಪಿಸಲು, ಒಳಸುರಿಯುವಿಕೆಗಳ ವೆಚ್ಚ ತಗ್ಗಿಸಲು, ತಾಳಿಕೆಯ ಸಾಮರ್ಥ್ಯ ಹೆಚ್ಚಿಸಲು ರೈತರಿಗೆ ನೆರವು ನೀಡುತ್ತದೆ.
ದಿನಕ್ಕೆ ಸರಾಸರಿ ಎರಡರಿಂದ ಮೂರು ಕರೆಗಳು ಇಲ್ಲವೇ ಒಟ್ಟಾರೆ ೧೦-೧೨ ರೈತರ ಕರೆ ಇಲ್ಲವೇ ಮಿಸ್ಡ್ ಕಾಲ್ಗಳನ್ನು ಎರಡು ಸಲಹೆಗಳ ನಡುವಿನ ಅವಧಿಯಲ್ಲಿ (ಸಲಹೆಗಳನ್ನುಕಳುಹಿಸಿದ ಐದು ದಿನದೊಳಗಾಗಿ) ಸ್ವೀಕರಿಸುತ್ತಾರೆ. ಕೆಲವೊಮ್ಮೆ ರೈತರು ತಮ್ಮ ಸಮಸ್ಯೆಗಳ ಕುರಿತಾದ ಚಿತ್ರಗಳನ್ನು ಅವರಿಗಾಗಿ ರೂಪಿಸಿರುವ ವಾಟ್ಸ್ಪ್ ಗ್ರೂಪಿನ ಮೂಲಕ ಕಳುಹಿಸುತ್ತಾರೆ. ಹವಾಮಾನ ಮುನ್ಸುಚನೆ, ಬೆಳೆ/ಜಾನುವಾರಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಕೇಳಲು ಕಾಯುತ್ತಿರುತ್ತಾರೆ. GEAGನ ಸಿಬ್ಬಂದಿಗಳು ರೈತರ ಪ್ರತಿ ಪ್ರಶ್ನೆಗೂ ಪ್ರಾಮಾಣಿಕವಾಗಿ ಉತ್ತರಿಸುತ್ತಾರೆ. ತಾವು ನೀಡಿದ ಸಲಹೆಗಳ ಅಳವಡಿಕೆ, ಪ್ರಸ್ತುತತೆ, ಹೊಸ ತಂತ್ರಜ್ಞಾನ ಅಳವಡಿಕೆಯ ಸಂದರ್ಭಗಳ ಕುರಿತು ರೈತರ ಪ್ರತಿಕ್ರಿಯೆಗಳನ್ನು ಸಂಗ್ರಹಿಸುತ್ತಾರೆ.
ಪರಿಣಾಮ
ಇಲ್ಲಿಯವರೆಗೆ ಗೋರಖ್ಪುರ ಮತ್ತು ಪಶ್ಚಿಮ ಚಂಪಾರಣ್ನ ೧೮ ಹಳ್ಳಿಗಳ ೧೨೦೦ ಸಣ್ಣ ಹಾಗೂ ಅತಿ ಸಣ್ಣ ರೈತರನ್ನು ಈ ಡಿಜಿಟಲ್ ಸೇವೆಯ ವ್ಯಾಪ್ತಿಗೆ ಒಳಪಡಿಸಲಾಗಿದೆ. ಖಾರಿಫ್, ರಾಬಿ ಋತುಗಳ ಮುಖ್ಯ ಬೆಳೆಗಳನ್ನು ಇದರ ಮೂಲಕ ಗಮನಿಸಲಾಗಿದೆ. ಎರಡೂ ರಾಜ್ಯಗಳ ೩೬ ಮಾದರಿ ರೈತರಿಗೆ ಬೆಳೆ ಸಲಹಗಾರರಾಗಿ, ಹವಾಮಾನ ಸಲಹಗಾರರಾಗಿ, ಜಿಯೋ ಟ್ಯಾಗಿಂಗ್ ಮತ್ತು ಬೆಳೆ ಆರೋಗ್ಯ ಮೇಲ್ವಿಚಾರಣೆಯಲ್ಲಿ GEAG ತರಬೇತಿ ನೀಡಿದೆ. ಈ ರೈತರು ಬಿಹಾರ್ ಮತ್ತು ಉತ್ತರ ಪ್ರದೇಶಗಳಲ್ಲಿ ಡಿಜಿಟಲ್ ಅನ್ವೇಷಣೆಗಳ ʼಬದಲಾವಣೆಯ ಕಾರ್ಯಕರ್ತರಾಗಿʼ ಕಾರ್ಯನಿರ್ವಹಿಸುತ್ತಿದ್ದಾರೆ.
ಹವಾಮಾನ ಮುನ್ಸುಚೂನೆಯ ಮಾನದಂಡಗಳು ೯೦-೯೫% ಸರಿಯಾಗಿದೆ ಎಂದು ರೈತರು ಕಂಡುಕೊಂಡಿದ್ದಾರೆ. ಎರಡೂ ರಾಜ್ಯಗಳ ರೈತರ ಪ್ರತಿಕ್ರಿಯೆಯ ಪ್ರಕಾರ ಡಿಜಿಟಲ್ ಸೇವೆಯು ಮುಂಜಾಗ್ರತಾ ಕ್ರಮ, ಅಳವಡಿಕಾ ಸಾಮರ್ಥ್ಯ ವೃದ್ಧಿ, ಖಾರಿಫ್ ಬೆಳೆಯನ್ನು ಸೂಕ್ತ ಸಮಯದಲ್ಲಿ ನಾಟಿ ಮಾಡಲು, ನೀರಾವರಿ ನಿರ್ವಹಣೆ, ಗೊಬ್ಬರ ಹಾಗೂ ಕೀಟನಾಶಕ ಬಳಕೆ ಇವುಗಳ ಕುರಿತು ಉಪಯೋಗಕಾರಿಯಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬೆಳೆಯ ಕೊಯ್ಲು ಸೂಕ್ತ ಸಮಯದಲ್ಲಿ ನಡೆಯುತ್ತಿದೆ.
ಮಳೆಯ ಕುರಿತಾದ ನಿಖರ ಮಾಹಿತಿಯು ಅನಾವಶ್ಯಕ ನೀರಾವರಿಯ ಖರ್ಚನ್ನು ತಗ್ಗಿಸಿದೆ, ಸಮಯಕ್ಕೆ ಸರಿಯಾಗಿ ಭತ್ತ, ತರಕಾರಿ ನಾಟಿ ಮಾಡಲು ಸಹಕಾರಿಯಾಗಿದೆ. ೪೫ ಮಂದಿ ರೈತರ ತೋಟದ ಅಂಕಿಅಂಶಗಳನ್ನು ಗಮನಿಸಿದಾಗ ನೀರಾವರಿ, ಕೀಟನಾಶಕ, ಗೊಬ್ಬರ ಇನ್ನಿತರ ಕೃಷಿ ಚಟುವಟಿಕೆಗಳ ವೆಚ್ಚದಲ್ಲಿ ೧೮-೨೦% ಇಳಿಕೆಯಾಗಿರುವುದು ಕಂಡುಬಂದಿದೆ. ಈ ಸೇವೆಯು ಸಣ್ಣ ಹಾಗೂ ಅತಿಸಣ್ಣ ರೈತರಿಗೆ ತಮ್ಮ ದೈನಂದಿನ ಚಟುವಟಿಕೆಗಳ ವಿಷಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚು ಪರಿಣಾಮಕಾರಿ ಹಾಗೂ ಸಹಾಯಕವಾಗಿದೆ. ಇದು ಒಟ್ಟಾರೆಯಾಗಿ ಅವರ ಆರ್ಥಿಕತೆಯ ಮೇಲೆ ಪ್ರಭಾವ ಬೀರಿದೆ.
ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳಲು ಸಲಹೆಗಳು
”ಹವಾಮಾನ ಮಾಹಿತಿಯು ಕೃಷಿ ಚಟುವಟಿಕೆಗಳ ವಿಷಯದಲ್ಲಿ ಪರಿಣಾಮಕಾರಿ ನಿರ್ಣಯ ತೆಗೆದುಕೊಳ್ಳಲು ನೆರವು ನೀಡುತ್ತದೆ” ಎಂದು ಗೋರಖ್ಪುರದ ರಖುಖೋರ್ ಹಳ್ಳಿಯ ೪೮ ವರ್ಷದ ಮಾದರಿ ರೈತ ರಾಂನಿವಾಸ್ ಹೇಳಿದರು.
ಗೋರಖ್ಪುರದಲ್ಲಿ ಕಳೆದೆರಡು ವರ್ಷಗಳಿಂದ ಮಳೆ ಕಡಿಮೆಯಾಗಿದೆ. ಹಾಗಾಗಿ ರೈತರು ಖಾರಿಫ್ ಋತುವಿನಲ್ಲಿ ಶೇಂಗಾ ಬೆಳೆಯುತ್ತಿದ್ದಾರೆ. ಹಳ್ಳಿಯಲ್ಲಿ ಹೆಚ್ಚುಕಡಿಮೆ ೫೦% ರೈತರು ಶೇಂಗಾ ಬಿತ್ತಿದರು. ಈ ವರ್ಷ ಪರಿಸ್ಥಿತಿ ಬದಲಾಯಿತು. ಇಡೀ ಗೋರಖ್ಪುರ ಪ್ರದೇಶದಲ್ಲಿ ಎರಡು ತಿಂಗಳಲ್ಲಿ(ಜೂನ್-ಜುಲೈ ೨೦೨೦) ೯೩೬ ಮಿಮೀ ಮಳೆಯಾಯಿತು. ಮಳೆ ಹೆಚ್ಚಾದ್ದರಿಂದ ಕೃಷಿಭೂಮಿ ಜಲಾವೃತಗೊಂಡು ಶೇಂಗಾ ಗಿಡಗಳಿಗೆ ಹಾನಿಯಾಯಿತು.
ಹವಾಮಾನ ಮುನ್ಸೂಚನೆಯ ಪ್ರಕಾರ ಏಪ್ರಿಲ್ ಕಡೆಯ ವಾರ ಮತ್ತು ಮೇ ಮೊದಲ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಂನಿವಾಸನಿಗೆ ಸೂಚನೆ ನೀಡಲಾಗಿತ್ತು. ಅವನು ಈ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ ಶೇಂಗಾ ಬಿತ್ತನೆಯನ್ನು ಮೇ ಮೊದಲ ವಾರದಲ್ಲಿ ಮಾಡಲು ಮುಂದೂಡಿದ. ತನ್ನ ೦.೨೦ ಕುಂಟೆಯಲ್ಲಿ ಶೇಂಗಾ ಬೆಳೆಯಲು ರೂ.೨೩೦೦ ಖರ್ಚುಮಾಡಿದ. ಅದನ್ನು ಮಾರಾಟ ಮಾಡುವ ಮೂಲಕ ರೂ.೪,೩೦೦ ಗಳಿಸಿದ. ಜೊತೆಗೆ ಬೇಸಿಗೆಯಲ್ಲಿ ಬೆಳೆ ಸಲಹೆಗಳನ್ನು ಅನುಸರಿಸಿ ಆತ ಒಳಸುರಿಯುವಿಕೆಗಳ ವೆಚ್ಚವನ್ನು ೩೦% ಕಡಿಮೆ ಮಾಡಿಕೊಂಡ (ಸೂಕ್ತ ಸಮಯದಲ್ಲಿ ನೀರಾವರಿ ಹಾಗೂ ಗೊಬ್ಬರ ಬಳಕೆ).

ಸ್ವಯಂಚಾಲಿತ ಹವಾಮಾನ ಕೇಂದ್ರದಲ್ಲಿ ಹವಾಮಾನ ದತ್ತಾಂಶದ ಸಂಗ್ರಹಣೆ ಹಾಗೂ ಸಂಸ್ಕರಣೆ
ಮುಂದಿನ ಹಾದಿ
ಎರಡು ವರ್ಷಗಳಲ್ಲಿ ಈ ಕ್ರಮವು ರೈತರಲ್ಲಿ ಆಸಕ್ತಿ ಹುಟ್ಟಿಸಿದೆ. ಮಾಹಿತಿ ಆಧರಿಸಿ ತೆಗೆದುಕೊಳ್ಳುತ್ತಿರುವ ಸೂಕ್ತನಿರ್ಣಯಗಳಿಂದಾಗಿ ಅವರ ತೋಟಗಳಲ್ಲಿ ಇತ್ಯಾತ್ಮಕ ಬದಲಾವಣೆಗಳಾಗಿವೆ. ಅಲ್ಪ ಸಮಯದಲ್ಲಿ ಸಾವಿರಾರು ಮಂದಿಯನ್ನು ತಲುಪುವುದು ಸುಲಭವಾಗಿರಲಿಲ್ಲ. ಈ ಕ್ರಮ ಹಾಗೂ ಮಾಹಿತಿಯ ಕುರಿತು ಜನರಲ್ಲಿ ನಂಬಿಕೆ ಹುಟ್ಟುವಂತೆ ಮಾಡುವುದು ಸಂಸ್ಥೆಗೆ ಸವಾಲಿನದಾಗಿತ್ತು. ಇನ್ನಿತರ ಸವಾಲುಗಳೆಂದರೆ ಕಳಪೆ ಅಂತರ್ಜಾಲ ಸಂಪರ್ಕ, ಪದೇ ಪದೇ ಸಿಮ್ ಬದಲಾಯಿಸುವುದರಿಂದ ರೈತರನ್ನು ಸಂಪರ್ಕಿಸುವುದು ಹಾಗೂ ಪ್ರತಿಕ್ರಿಯೆ ಪಡೆಯುವುದು ಕಷ್ಟವಾಗಿತ್ತು. ಕೃಷಿವಲಯದೊಂದಿಗೆ ಮತ್ತು ಸಮುದಾಯದೊಂದಿಗೆ ಕೆಲಸ ಮಾಡುತ್ತ ಪಡೆದ ಅನುಭವ, ಸ್ಥಳೀಯ IMD ಕಛೇರಿ, ಕೃಷಿ ವಿಶ್ವವಿದ್ಯಾಲಯದ ಸಹಾದಿಂದ GEAG ಯಶಸ್ವಿಯಾಗಿ ಈ ಕ್ರಮವನ್ನು ಅತಿಹೆಚ್ಚು ಅಪಾಯ ಎದುರಿಸುವ ಪ್ರದೇಶಗಳಲ್ಲಿ ಅಳವಡಿಸಿತು.
ಕೃಷಿವಲಯದಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಕೆಗೆ ಅತಿಹೆಚ್ಚು ಸಾಧ್ಯತೆಗಳಿವೆ. ಇಂದು ಇಲ್ಲಿನ ಬಹುತೇಕ ರೈತರು ಅದರಲ್ಲೂ ಯುವ ರೈತರು ಸ್ಮಾರ್ಟ್ಫೋನುಗಳನ್ನು ಬಳಸುತ್ತಿದ್ದಾರೆ. ಫೋನಿನ ಮೂಲಕ ಹಲವಾರು ಕೃಷಿ ಚಟುವಟಿಕೆಗಳ ಕುರಿತು ಮಾಹಿತಿ ಪಡೆಯುತ್ತಿದ್ದಾರೆ. ಅವರ ಭೂಮಿಗೆ ಹೊಂದುವ ಬೀಜಗಳು, ಜೈವಿಕ ಗೊಬ್ಬರ ತಯಾರಿಕೆ, ಬೆಳೆಯನ್ನು ರೋಗ ಹಾಗೂ ಕೀಟಗಳನ್ನು ರಕ್ಷಿಸುವುದು, ಮಾರುಕಟ್ಟೆಯ ಸಾಧ್ಯತೆಗಳು, ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಾದ ಯೂಟ್ಯೂಬ್, ವಾಟ್ಸ್ಆಪ್ ಗುಂಪು ಇತ್ಯಾದಿಗಳನ್ನು ಇದರ ಮೂಲಕ ಅವಳವಡಿಸಿಕೊಳ್ಳುತ್ತಿದ್ದಾರೆ. ಹವಾಮಾನ ಮುನ್ಸೂಚನೆ ಮಾಹಿತಿ ಹಾಗೂ ಇನ್ನಿತರ ಕೃಷಿ ಸಲಹೆಗಳನ್ನು ಅನುಸರಿಸಿ ಅಳವಡಿಸಿಕೊಂಡಂತಹ ರೈತರು ಯಶಸ್ವಿಯಾಗುತ್ತಿದ್ದಾರೆ. ಅವರ ಬೆಳೆ, ಆದಾಯ ಹೆಚ್ಚಾಗಿದ್ದು ಹವಾಮಾನ ವೈಪರಿತ್ಯದ ತಾಳಿಕೆಯು ಹೆಚ್ಚಾಗಿದೆ. ಆದ್ದರಿಂದ ಕೃಷಿ ಚಟುವಟಿಕೆಯಲ್ಲಿ ಇನ್ನಷ್ಟು ಅನ್ವೇಷಣೆಗಳನ್ನು ಡಿಜಿಟಲ್ ತಂತ್ರಜ್ಞಾನದೊಂದಿಗೆ ಅಳವಡಿಸಿಕೊಳ್ಳುವ ತುರ್ತು ಹೆಚ್ಚಿದೆ. ಸರ್ಕಾರಗಳು, ವ್ಯಾಪಾರ ಹಾಗೂ ರೈತರ ನಡುವೆ ಸಹಭಾಗಿತ್ವಗಳು ಹೆಚ್ಚಬೇಕಿದೆ. ಜೊತೆಗೆ ಡಿಜಿಟಲ್ ತಂತ್ರಜ್ಞಾನವು ರೈತರಿಗೆ ಬಳಸಲು ಸಾಧ್ಯವಾಗುವಂತಾಗುವ ವಾತಾವರಣ ನಿರ್ಮಾಣವಾಗಬೇಕು.
ಕೃತಜ್ಞತೆಗಳು
ನಾವು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸೀಡ್ ವಿಭಾಗಕ್ಕೆ ಕೃತಜ್ಞರಾಗಿದ್ದೇವೆ. ಅವರು ಹವಾಮಾನ ವೈಪರಿತ್ಯಗಳಿರುವ ಉತ್ತರ ಪ್ರದೇಶದ ಪಶ್ಚಿಮ ಭಾಗ ಮತ್ತು ಉತ್ತರ ಬಿಹಾರದಲ್ಲಿನ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೆರವಾಗುವಂತಹ ತಂತ್ರಜ್ಞಾನ ಅಭಿವೃದ್ಧಿಗೆ ನೆರವು ನೀಡಿದ್ದಾರೆ. GEAGನ ಹವಾಮಾನ ತಜ್ಞರಾದ ಶ್ರೀ ಕೈಲಾಶ್ ಪಾಂಡೆ ಅವರು ರೈತರಿಗೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಹವಾಮಾನ ಮತ್ತು ಕೃಷಿ ಸಲಹೆ ನೀಡಲು ನೆರವು ನೀಡಿದ್ದಾರೆ. ಅವರಿಗೂ ನಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ.
References
Pandey, K and Mishra, R, Weather-Agro Advisories:
Empowering Transboundary Communities in India
and Nepal, 2019, published by GEAG, https://geagindia.
org/sites/default/files/2020-03/Paper-Weather-Agro-
Advisories-Revised-190904.pdf
ಬಿ ಕೆ ಸಿಂಗ್, ಅಜಯ್ ಸಿಂಗ್ ಮತ್ತು ಅರ್ಚನ ಶ್ರೀವಾಸ್ತವ
B K Singh
Senior Programme Officer
Ajay Singh
Programme Professional
Archana Srivastava
Programme Officer
Gorakhpur Environmental Action Group
224, Purdilpur, M G College Road
Gorakhpur – 273 001, Uttar Pradesh, India.
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :೨೨; ಸಂಚಿಕೆ : ೨ ; ಜೂನ್ ೨೦೨೦



