ಸಿರಿಧಾನ್ಯಗಳ ಬಗ್ಗೆ ಗ್ರಾಹಕರಿಗೆ ಹೆಚ್ಚಿನ ಅರಿವಿಲ್ಲ. ಇವುಗಳಿಗೆ ಬೇಡಿಕೆಯು ಕಡಿಮೆ, ಲಾಭವೂ ಕಡಿಮೆ. ಸಂಶೋಧನ ಸಂಸ್ಥೆಗಳಿಗೆ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಇವುಗಳ ಬಗೆಗಿನ ಆಸಕ್ತಿ ಕಡಿಮೆ. ಸಿರಿಧಾನ್ಯಗಳಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿವೆ, ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಕೂಡ ರೈತರು ಇವುಗಳನ್ನು ಬೆಳೆಯಬಹುದು ಇಷ್ಟೆಲ್ಲ ಅನುಕೂಲಗಳಿದ್ದರೂ ಇವುಗಳ ಬಗ್ಗೆ ಆಸಕ್ತಿಯಿಲ್ಲದಿರುವುದು ಅಚ್ಚರಿಯ ಸಂಗತಿ. ಇವು ಪರಿಸರಕ್ಕೆ ಹಾನಿಯುಂಟುಮಾಡುವುದಿಲ್ಲ. ಇವುಗಳನ್ನು ಬೆಳೆಯಲು ಬೇಕಾಗುವ ನೀರು ಅತ್ಯಲ್ಪ, ಯಾವುದೇ ರೀತಿಯ ಗೊಬ್ಬರವಾಗಲಿ ಕೀಟನಾಶಕಗಳಾಗಲಿ ಅಗತ್ಯವಿಲ್ಲ. ರೈತರು ಸಿರಿಧಾನ್ಯಗಳನ್ನು ಜನಪ್ರಿಯಗೊಳಿಸಲು ಅಡ್ಡಿಯಾಗಿರುವ ಸಂಗತಿಗಳನ್ನು ನಿವಾರಿಸಿಕೊಳ್ಳುವ ಮೂಲಕ ಹೊಸ ಅಲೆಯೊಂದನ್ನು ಹುಟ್ಟುಹಾಕಿದ್ದಾರೆ.
ನಾವು ತೋಟದೊಳಗೆ ನಡೆದುಹೋಗುತ್ತಿದ್ದಂತೆ ಇನ್ನೂ ನಿರ್ಮಾಣ ಹಂತದಲ್ಲಿದ್ದ ಶೆಡ್ ಕಣ್ಣಿಗೆ ಬಿತ್ತು. “ಈ ಸುತ್ತಲ ಹಳ್ಳಿಗಳಲ್ಲಿನ ಕನಿಷ್ಠ ೧೦೦ ಮಂದಿ ಯುವಜನರಿಗೆ ನಮ್ಮ ಸಾಂಪ್ರದಾಯಿಕ ಬೆಳೆಗಳಾದ ಸಿರಿಧಾನ್ಯಗಳು ಮತ್ತು ಜೋಳದ ಮೂಲಕ ಉದ್ಯೋಗ ಒದಗಿಸುವ ಯೋಜನೆ ಹಾಕಿಕೊಂಡಿದ್ದೇನೆ. ಅದರ ಮೂಲಕ ಅವರನ್ನು ಪುನಃ ಕೃಷಿಯತ್ತ ಸೆಳೆಯುವ ಉಪಾಯ ಮಾಡುತ್ತಿದ್ದೇನೆ.”
ನಾವು ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಗಂಗಾಪುರ ಹಳ್ಳಿಯ ಶ್ರೀ ಶೆಟ್ಟಿಯವರೊಂದಿಗಿದ್ದೆವು. ಅವರು ರೈತರಾಗಿದ್ದವರು ಉದ್ಯಮಿಯಾಗಿ ಪರಿವರ್ತನೆ ಹೊಂದುವ ಹಾದಿಯಲ್ಲಿದ್ದಾರೆ. ಆತ ತಮ್ಮದೇ ಆದ ಆಹಾರ ಸಂಸ್ಕರಣ ಘಟಕ, ಸಿರಿಧಾನ್ಯಗಳನ್ನಾಧರಿಸಿದ ರೆಡಿ ಟು ಈಟ್ ಆಹಾರ ತಯಾರಿಕಾ ಘಟಕವನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಇನ್ನು ಮೂರು ನಾಲ್ಕು ತಿಂಗಳಲ್ಲಿ ಈ ಘಟಕ ಪೂರ್ಣಗೊಳ್ಳಲಿದೆ. ಹೈದರಾಬಾದಿನಲ್ಲಿ ಅಂಗಡಿ ಹಾಗೂ ಹೋಟೆಲ್ ಹೊಂದಿದ್ದಾರೆ. ಅಲ್ಲಿ ಸಿರಿಧಾನ್ಯಗಳ ಉತ್ಪನ್ನಗಳನ್ನು ಮಾರಾಟಮಾಡುತ್ತಿದ್ದಾರೆ. ಸಜ್ಜೆಯ ರೊಟ್ಟಿ, ಜೋಳದ ರೊಟ್ಟಿ, ಹಲವು ಧಾನ್ಯಗಳ ಲಡ್ಡು, ಪೂರ್ಣಪೋಲಿ, ಮಿಲೆಟ್ ಮಾಲ್ಟ್ ಇತ್ಯಾದಿಗಳನ್ನು ಮಾರುತ್ತಾರೆ. ಅಲ್ಲಿಗೆ ಪ್ರತಿನಿತ್ಯ ೨೦೦ – ೩೦೦ ಗ್ರಾಹಕರು ಭೇಟಿ ನೀಡುತ್ತಾರೆ. ಈ ಅಂಗಡಿ – ಹೋಟೆಲ್ ಮೂಲಕ ಶೆಟ್ಟಿಯವÀರು ಒಂದೆಡೆ ನಗರ ಪ್ರದೇಶದ ಗ್ರಾಹಕರನ್ನು ಆರೋಗ್ಯಪೂರ್ಣ ಆಹಾರ ತಿನ್ನಲು ಉತ್ತೇಜಿಸಿದರೆ ಮತ್ತೊಂದೆಡೆ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದ್ದಾರೆ.
ಮೂವರು ಅಣ್ಣ ತಮ್ಮಂದಿರಲ್ಲಿ ಶೆಟ್ಟಿಯವರೇ ಹಿರಿಯರು. ಹತ್ತನೆಯ ತರಗತಿಯವರೆಗೆ ಓದಿದ ನಂತರ ಕುಟುಂಬ ನಿರ್ವಹಣೆಗಾಗಿ ದುಡಿಯಲು ಹೋಗಬೇಕಾಯಿತು. ಚಾಲಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ೨೦೦೫ರಿಂದ ಜೋಳ ಬೆಳೆಯುವತ್ತ ತಮ್ಮ ಗಮನಕೇಂದ್ರೀಕರಿಸಿದರು. ೨೦೦೭ರಲ್ಲಿ ಹೈದರಾಬಾದಿನಲ್ಲಿ ಜೋಳದ ರೊಟ್ಟಿ ಮಾರುವ ಸಣ್ಣ ಅಂಗಡಿಯೊAದನ್ನು ತೆರೆದರು. ಆ ಸಮಯದಲ್ಲಿ ಜನರಿಗೆ ಜೋಳ ಮತ್ತಿತರ ಸಿರಿಧಾನ್ಯಗಳ ಬಳಕೆಯ ಲಾಭಗಳ ಅರಿವಿರಲಿಲ್ಲ. ಹಾಗಾಗಿ ಅವರ ಪ್ರಯತ್ನ ವಿಫಲವಾಯಿತು. ಅವರು ತಮ್ಮ ಅಂಗಡಿಯನ್ನು ಮತ್ತೊಂದೆಡೆ ಅಂದರೆ ಗ್ರಾಹಕರು ಹೆಚ್ಚಾಗಿ ಬರುವ ಸ್ಥಳಕ್ಕೆ ಸ್ಥಳಾಂತರಿಸಲು ಯೋಚಿಸಿದರು. ಅಲ್ಲಿಗೆ ಡಯಾಬಿಟೀಸ್ ಕಾಯಿಲೆಯ ಗ್ರಾಹಕರು ಹೆಚ್ಚಾಗಿ ಬರುತ್ತಿದ್ದರು. ನಂತರ ಅವರು ಎಸ್ಎಸ್ಭವಾನಿ ಫುಡ್ಸ್ ಅನ್ನು ದೊಡ್ಡಮಟ್ಟದಲ್ಲಿ ಆರಂಭಿಸಿದರು. ಅಲ್ಲಿ ದೊಡ್ಡ ಮಟ್ಟದ ಸೌಲಭ್ಯಗಳೊಂದಿಗಿನ ಅಡುಗೆಕೋಣೆ ಹಾಗೂ ಚಿಕ್ಕ ಹೋಟೆಲ್ ಆರಂಭವಾಯಿತು. ಸಿರಿಧಾನ್ಯಗಳನ್ನು ಆಧರಿಸಿದ ಊಟದೊಂದಿಗೆ ಹೋಟಲಿನ ಗೋಡೆಯ ಮೇಲೆ ಸಿರಿಧಾನ್ಯಗಳ ಪೌಷ್ಟಿಕಾಂಶಗಳ ವಿವರ ಮತ್ತು ಲಾಭಗಳನ್ನು ತಿಳಿಪಡಿಸುವ ಭಿತ್ತಿಪತ್ರಗಳನ್ನು ಅಂಟಿಸಿದ್ದಾರೆ. ಅವರ ಉದ್ದೇಶ ಗ್ರಾಹಕರಲ್ಲಿ ಸಿರಿಧಾನ್ಯಗಳ ಬಳಕೆ ತರುವ ಲಾಭಗಳ ಬಗ್ಗೆ ಅರಿವು ಮೂಡಿಸುವುದು.
ಫೋಟೊ : ವಿವಿಧ ಸಿರಿಧಾನ್ಯಗಳ ಉತ್ಪನ್ನಗಳ ಪ್ರದರ್ಶನ
ಶೆಟ್ಟಿಯವರು ರೊಟ್ಟಿ ಮಾಡುವ ಯಂತ್ರವೊAದನ್ನು ವಿನ್ಯಾಸಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಇದನ್ನು ತಯಾರಿಸಲಾಗಿದೆ. ಇದು ಗಂಟೆಗೆ ೫೦೦ ರೊಟ್ಟಿಗಳನ್ನು ಮಾಡುತ್ತದೆ. ತಮ್ಮ ಅಂಗಡಿಯಲ್ಲಿ ಪ್ರತಿದಿನ ೨,೦೦೦ – ೩,೦೦೦ ರೊಟ್ಟಿಗಳನ್ನು ಮಾರುತ್ತಾರೆ. ಅವರ ಅಂಗಡಿಯಿAದ ರಫ್ತು ಏಜೆನ್ಸಿಯ ಮೂಲಕ ದುಬೈಗೆ ಪೂರನ್ಪೊಲಿಯನ್ನು ರಫ್ತು ಮಾಡಲಾಗುತ್ತದೆ ಮತ್ತು ಆಸ್ಟೆçÃಲಿಯಾಗೆ ಒಣಗಿಸಿದ ರೊಟ್ಟಿಗಳನ್ನು ರಫ್ತು ಮಾಡಲಾಗುತ್ತದೆ. ಈ ರೊಟ್ಟಿಗಳು ಆರು ತಿಂಗಳ ಕಾಲ ಹಾಳಾಗದೆ ಇರಬಲ್ಲವು. ಪ್ರತಿತಿಂಗಳು ಸುಮಾರು ೨,೦೦೦ ರೊಟ್ಟಿಗಳು ಮತ್ತು ೩೦೦ -೪೦೦ ಪೂರನ್ಪೊಲಿಗಳು ರಫ್ತಾಗುತ್ತವೆ.
೨೦೧೬ರಲ್ಲಿ ಶೆಟ್ಟಿಯವರು ಸಿರಿಧಾನ್ಯಗಳನ್ನು ಬೆಳೆವ ರೈತರೊಂದಿಗೆ ಕೆಲಸ ಮಾಡಲು ಸ್ವಯಂ ಶಕ್ತಿ ಅರ್ಗಿ ಫೌಂಡೇಶನ್ ಆರಂಭಿಸಿದರು. ಈ ಫೌಂಡೇಶನ್ ಮೂಲಕ ಅವರು ರೈತರಿಗೆ ಅಗತ್ಯವಾದ ಸಲಕರಣೆ/ಸಲಹೆಗಳನ್ನು ನೀಡುತ್ತಾರೆ. ಉತ್ತಮ ಇಳುವರಿ ಪಡೆಯಲು ಅನುಸರಿಸಬೇಕಾದ ವಿಧಾನಗಳ ಕುರಿತು ತರಬೇತಿ ನೀಡುತ್ತಾರೆ. ಅವರ ಇಳುವರಿಗೆ ಉತ್ತಮ ಬೆಲೆ ನೀಡಿ ಅವರಿಂದ ಕೊಳ್ಳುತ್ತಾರೆ. ಈ ಫೌಂಡೇಶನ್ ಎಂ.ಎಸ್. ಸ್ವಾಮಿನಾಥನ್ ರಿಸರ್ಚ ಫೌಂಡಶೇನ್ನೊAದಿಗೆ ಸೇರಿ ಕೊರಪುಟ್ ಜಿಲ್ಲೆಯ ೫೦೦ ಬುಡಕಟ್ಟು ರೈತರನ್ನು ತಲುಪಿದೆ. ಅವರಿಗೆ ಸಿರಿಧಾನ್ಯಗಳ ವಿವಿಧ ಉತ್ಪನ್ನಗಳಾದ ಲಡ್ಡು, ಶ್ಯಾವಿಗೆ, ಚಿವಾಡ, ರೊಟ್ಟಿ ಇತ್ಯಾದಿಗಳನ್ನು ತಯಾರಿಸುವ ವಿಧಾನದ ಕುರಿತು ತರಬೇತಿ ನೀಡುತ್ತಾರೆ. ಕೃಷಿಗೆ ಸಂಬAಧಿಸಿದ ವಿವಿಧ ಸಂಗತಿಗಳಾದ ಕಾಯಿಲೆಗಳನ್ನು ತಡೆಗಟ್ಟುವ ಬಗೆ, ಮಳೆನೀರು ಕೊಯ್ಲು, ಎರೆಹುಳುಗೊಬ್ಬರ ತಯಾರಿಕಾ ವಿಧಾನ, ಏರೋಬಿಕ್ ಗೊಬ್ಬರ ತಯಾರಿಕಾ ವಿಧಾನ, ಮಣ್ಣಿನ ಸಾವಯವಗುಣ ಅಭಿವೃದ್ಧಿ, ವಿವಿಧ ಬಿತ್ತನೆ ವಿಧಾನಗಳು ಇತ್ಯಾದಿಗಳ ಕುರಿತು ತರಬೇತಿ ನೀಡುತ್ತಾರೆ.
ಇಂಡಿಯನ್ ಇನ್ಸಿಟ್ಯೂಟ್ ಆಫ್ ಮಿಲೆಟ್ಸ್ ರಿಸರ್ಚನವರೊಡನೆ ಸೇರಿ ಮತ್ತೊಂದು ಯೋಜನೆಯಲ್ಲಿ ಶೆಟ್ಟಿಯವರು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ೮ ಹಳ್ಳಿಗಳ ೧,೦೦೦ ರೈತರೊಂದಿಗೆ ಕೆಲಸಮಾಡುತ್ತಿದ್ದಾರೆ. “ಒಂದು ಕೆಜಿ ಬೀಜವನ್ನು ಕೊಳ್ಳಲು ರೈತರು ನಗರಕ್ಕೆ ಹೋಗಬೇಕಾಗುತ್ತದೆ. ಅಲ್ಲಿಗೆ ಹೋದಾಗಲು ಅವರಿಗೆ ತಾವು ಕೊಳ್ಳುತ್ತಿರುವ ಬೀಜದ ಗುಣಮಟ್ಟ ಹೇಗಿದೆ ಎನ್ನುವುದು ತಿಳಿಯುವುದಿಲ್ಲ. ನಾವು ಅವರ ಮನೆಬಾಗಿಲಿಗೆ ಬೀಜಗಳನ್ನು ಪೂರೈಸುತ್ತೇವೆ. ಮಾರುಕಟ್ಟೆಯಲ್ಲಿನ ಬೆಲೆ ಹಾಗೂ ಬೇಡಿಕೆಗಳನ್ನು ಆಧರಿಸಿ ನಾವು ಅವರಿಗೆ ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು ಎಂದು ಸಲಹೆ ನೀಡುತ್ತೇವೆ.” ರೈತರಿಂದ ಬೆಳೆಯನ್ನು ಸಂಗ್ರಹಿಸಿದ ಬಳಿಕ ಆಹಾರ ಉತ್ಪನ್ನಗಳಿಗೆ, ಮೇವಿಗೆ ಹಾಗೂ ಇನ್ನಿತರ ಉದ್ದೇಶಗಳಿಗೆ ತಕ್ಕಹಾಗೆ ಅದನ್ನು ವಿಂಗಡಿಸಲಾಗುತ್ತದೆ. ಮನುಷ್ಯರ ಬಳಕೆಗೆ ಸೂಕ್ತವಾದಂತಹದ್ದನ್ನು ಉಳಿಸಿಕೊಂಡು ಉಳಿದದ್ದನ್ನು ಬೀಜ ಕಂಪನಿಗಳಿಗೆ, ಜಾನುವಾರು ಮೇವು ಉತ್ಪಾದನಾ ಕಂಪನಿಗಳಿಗೆ ಮತ್ತು ಎಥನಾಲ್ ಉತ್ಪಾದನಾ ಕಂಪನಿಗಳಿಗೆ ಮಾರಾಟ ಮಾಡಲಾಗುತ್ತದೆ.
ಸಿರಿಧಾನ್ಯಗಳ ಆರೋಗ್ಯದ ಲಾಭಗಳನ್ನು ವಿವರಿಸುತ್ತಾ ಶೆಟ್ಟಿಯವರು ಹೇಳುತ್ತಾರೆ “ನನ್ನ ಗ್ರಾಹಕರಲ್ಲಿ ೬೦% ಮಂದಿ ಐಟಿಯಲ್ಲಿ ಕೆಲಸ ಮಾಡುತ್ತಿರುವ ಯುವ ಉದ್ಯೋಗಿಗಳು. ಅವರೆಲ್ಲ ಸ್ಥೂಲಕಾಯ/ಬೊಜ್ಜು ಮತ್ತು ಡಯಾಬಿಟೀಸ್ನಂತಹ ಆರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಉಳಿದ ಗ್ರಾಹಕರು ಮಧ್ಯವಯಸ್ಕರು ಅಥವ ವಯಸ್ಸಾದವರು ಅವರಿಗೆ ಅವರದೇ ಆದ ಆರೋಗ್ಯದ ಸಮಸ್ಯೆಗಳಿವೆ. ಆರೋಗ್ಯದ ಕಾಳಜಿ ವಹಿಸುವ ಗ್ರಾಹಕರ ಪ್ರಮಾಣ ಅತ್ಯಲ್ಪ. ಜೀವನಶೈಲಿಯ ದೆಸೆಯಿಂದಲೇ ಹೆಚ್ಚುತ್ತಿರುವ ಕಾಯಿಲೆಗಳಿಗೆ ವೈದ್ಯರು ಸಿರಿಧಾನ್ಯಗಳನ್ನಾಧರಿಸಿದ ಪಥ್ಯವನ್ನು ಅನುಸರಿಸಲು ರೋಗಿಗಳಿಗೆ ಸಲಹೆ ನೀಡುತ್ತಿದ್ದಾರೆ”.
ಫೋಟೊ : ಪ್ರದರ್ಶಿಸಿರುವ ವಿವಿಧ ಉತ್ಪನ್ನಗಳನ್ನು ವಿವರಿಸುತ್ತಿರುವುದು
ಹೆಚ್ಚಿನ ಆದಾಯವಿಲ್ಲದಿರುವುದರಿಂದ ರೈತರು ಸಿರಿಧಾನ್ಯಗಳನ್ನು ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ. “ನಗರ ಪ್ರದೇಶಗಳಲ್ಲಿನ ಗ್ರಾಹಕರಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಪ್ರಚುರಪಡಿಸಿದಲ್ಲಿ ಬೇಡಿಕೆ ಹೆಚ್ಚಾಗುತ್ತದೆ. ಆಗ ಹೆಚ್ಚಿನ ರೈತರನ್ನು ಸಿರಿಧಾನ್ಯಗಳ ಕೃಷಿಯತ್ತ ಹೊರಳುವಂತೆ ಮಾಡಬಹುದು” ಎನ್ನುತ್ತಾರೆ ಶೆಟ್ಟಿ.
ಸರ್ಕಾರವು ಕೂಡ ಸಿರಿಧಾನ್ಯಗಳ ಬಳಕೆಯನ್ನು ಪ್ರಚುರಪಡಿಸಲು ಬಹಳಷ್ಟು ಕೆಲಸ ಮಾಡಬಹುದು. ಸರ್ಕಾರಿ ಸಂಕೀರ್ಣಗಳಾದ ಸೆಕ್ರೆಟರಿಯೆಟ್ನಂತಹ ಕಛೇರಿಗಳ ಆವರಣದಲ್ಲಿನ ಕ್ಯಾಂಟೀನುಗಳಲ್ಲಿ; ಬುಡಕಟ್ಟು ಕಲ್ಯಾಣ ಇಲಾಖೆಯ ವತಿಯಿಂದ ನಡೆಸುವ ಆಶ್ರಮದ ಶಾಲೆಗಳು; ವಸತಿ ಶಾಲೆಗಳಾದ ಜವಹಾರ ನವೋದಯ ಶಾಲೆಗಳು, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿವಿಧ ರಾಜ್ಯಗಳಲ್ಲಿ ನಡೆಸಲಾಗುತ್ತಿರುವ ಶಾಲೆಗಳು; ಮಧ್ಯಾಹ್ನದ ಬಿಸಿಯೂಟದ ಯೋಜನೆ ಇಲ್ಲೆಲ್ಲ ಸಿರಿಧಾನ್ಯಗಳ ಬಳಕೆಯನ್ನು ಪ್ರಚುರಪಡಿಸಬಹುದು. ನಗರ ಪ್ರದೇಶಗಳಲ್ಲಿ ಸಿರಿಧಾನ್ಯಗಳ ಸಂಸ್ಕರಣೆ ಮತ್ತು ವ್ಯಾಪಾರಿ ಮಳಿಗೆಗಳ ಉದ್ಯಮಕ್ಕೆ ಪ್ರೋತ್ಸಾಹ ನೀಡಬಹುದು. “ಕೆಲವು ರಾಜ್ಯಸರ್ಕಾರಗಳು ಉದಾಹರಣೆಗೆ ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳು ಜನರಿಗೆ ರಿಯಾಯ್ತಿ ದರದಲ್ಲಿ ಊಟವನ್ನು ಒದಗಿಸುತ್ತದೆ. ಅಲ್ಲಿನ ಊಟ ಅನ್ನ ಮತ್ತು ಸಾಂಬಾರ್. ಇಲ್ಲಿ ಅಕ್ಕಿಗೆ ಬದಲಾಗಿ ಈ ಧಾನ್ಯಗಳನ್ನು ಬಳಸಬಹುದು” ಎಂದು ಶೆಟ್ಟಿಯವರು ಹೇಳುತ್ತಾರೆ. ಸರ್ಕಾರವು ರೈತರು ತಮ್ಮ ಭೂಮಿಯಲ್ಲಿ ಕನಿಷ್ಠ ೧೦% ಸಿರಿಧಾನ್ಯಗಳನ್ನು ತಾವು ಬೆಳೆಯುವ ಇತರ ಬೆಳೆಗಳೊಂದಿಗೆ ಬೆಳೆಯಲು ಪ್ರೋತ್ಸಾಹಿಸಬೇಕು. ಆಹಾರ ಸಂಸ್ಕರಣಯAತ್ರಗಳ ಮೇಲೆ ತೆರಿಗೆ ವಿನಾಯ್ತಿ ನೀಡಬೇಕು, ಸಿರಿಧಾನ್ಯಗಳಿಗೆ ಬೆಂಬಲಬೆಲೆ ನೀಡಬೇಕು, ಸರ್ಕಾರಿ ಸ್ವಾಮ್ಯದ ಕ್ಯಾಂಟೀನು, ಹಾಸ್ಟಲ್ಲುಗಳು ಇತ್ಯಾದಿಗಳಲ್ಲಿ ಬಳಸಲು ಇವುಗಳನ್ನು ಕೊಳ್ಳುವ ಮೂಲಕ ಸರ್ಕಾರವು ರೈತರಿಗೆ ನೆರವು ನೀಡಬಹುದು.
“ಜನ ಸಿರಿಧಾನ್ಯಗಳನ್ನು ಬಳಸಲು ಬಯಸುತ್ತಾರೆ. ಆದರೆ ಅವು ಸುಲಭವಾಗಿ ಸಿಗುತ್ತಿಲ್ಲ” ಎನ್ನುತ್ತಾರೆ. ಗಂಗಾಪುರ ಹಳ್ಳಿಯಲ್ಲಿನ ಅವರ ಆಹಾರ ಸಂಸ್ಕರಣ ಘಟಕ ಬಹುದೊಡ್ಡ ಕನಸೊಂದಕ್ಕೆ ಬುನಾದಿಯಾಗಿದೆ. ಗೋದಾಮು, ರೈತರ ತರಬೇತಿ ಕೇಂದ್ರ, ಪ್ರಾಯೋಗಿಕ ಕ್ಷೇತ್ರ, ಸಾವಯವ ಕೃಷಿ ಹೀಗೆ ಹಲವು ಯೋಜನೆಗಳು ಶೆಟ್ಟಿಯವರ ಕನಸಿಗೆ ರೆಕ್ಕೆ ಜೋಡಿಸಿ ಜೀವತುಂಬಲು ಸಾಲಾಗಿ ಕಾಯುತ್ತಿವೆ. ಈ ಘಟಕದಿಂದ ಸಿರಿಧಾನ್ಯಗಳನ್ನಾಧರಿಸಿದ ಉತ್ಪನ್ನಗಳನ್ನು ನಗರದ ಗ್ರಾಹಕರಿಗೆ, ವಿವಿಧ ನಗರಗಳ ಮಳಿಗೆಗಳಿಗೆ ಮತ್ತು ವಿದೇಶದ ಮಾರುಕಟ್ಟೆಗಳಿಗೆ ಪೂರೈಸಲು ಯೋಜಿಸಿದ್ದಾರೆ. “ಪ್ರಪಂಚದಾದ್ಯAತ ಆರೋಗ್ಯಕರ ಜೀವನಶೈಲಿಯನ್ನು ಬಯಸುವ ಗ್ರಾಹಕರನ್ನು ತಲುಪಬೇಕೆಂಬುದು ನನ್ನಾಸೆ. ಆ ಮೂಲಕ ನನ್ನ ರೈತಮಿತ್ರರಿಗೆ ಲಾಭದೊರಕಿಸಿಕೊಡಬಹುದು” ಎನ್ನುತ್ತಾರೆ ಶೆಟ್ಟಿ.
ಅಮಿತ್ ಚರ್ಕವರ್ತಿ
Amit Chakravarty
Chief of Staff to the Director General
ICRISAT
Patancheru 502324 Telangana, India
E-mail: a.chakravarty@cgiar.org
ಆಂಗ್ಲ ಮೂಲ
ಲೀಸಾ ಇಂಡಿಯಾ, ಸಂಪುಟ ೧೯ , ಸಂಚಿಕೆ ೪ , ಡಿಸಂಬರ್ ೨೦೧೭



