ತ್ವರಿತ ನಗರೀಕರಣ, ಕೈಗಾರಿಕೀಕರಣ, ಲ್ಯಾಂಡ್ ಸೀಲಿಂಗ್, ಬಹುಮಹಡಿ ಕಟ್ಟಡಗಳ ನಿರ್ಮಾಣ, ವಿಶಾಲವಾದ ರಸ್ತೆಗಳು, ಕಚೇರಿಗಳು, ಮಾರುಕಟ್ಟೆಗಳ ಪರಿಣಾಮವಾಗಿ ದೊಡ್ಡ ನಗರಗಳು ಮತ್ತು ಪಟ್ಟಣಗಳಲ್ಲಿ ಕೃಷಿಗೆ ಭೂಮಿ ಲಭ್ಯವಿಲ್ಲ. ನಗರಗಳಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಮತ್ತು ಹೆಚ್ಚುತ್ತಿರುವ ವಾಹನ ಮಾಲಿನ್ಯವು ಆತಂಕಕ್ಕೆ ಕಾರಣವಾಗಿವೆ. ಏಕತಾನತೆಯನ್ನು ಮುರಿದು, ದಣಿದ ಮನಸ್ಸಿಗೆ ವಿಶ್ರಾಂತಿ ನೀಡುವ ಅವಶ್ಯಕತೆ ತುಂಬಾ ಇದೆ. ತಾರಸಿ ತೋಟ ನಗರ ನಿವಾಸಿಗಳಿಗೆ ಕೈಗೆಟುಕುವ ಆಯ್ಕೆಯಾಗಿದೆ. ಇದರಿಂದ ಹಲವಾರು ಪ್ರಯೋಜನಗಳಿವೆ.
ಕೈತೋಟ ಕೃಷಿ ಆರೋಗ್ಯಕರ ಉತ್ಪನ್ನ ಪಡೆಯುವ ಹಳೆಯ ಪದ್ಧತಿಯಾಗಿದೆ. ಹಿತ್ತಲಲ್ಲಿ ಬೆಳೆಸುವ ಕೈತೋಟವು ನಮ್ಮ ದೈನಂದಿನ ಊಟಕ್ಕೆ ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ತರಕಾರಿಗಳನ್ನು ಒದಗಿಸುತ್ತದೆ. ನಗರ ಪ್ರದೇಶಗಳಲ್ಲಿ ಭೂಮಿಯ ಕೊರತೆ ಇರುವುದರಿಂದ ಕೈತೋಟ ಮಾಡುವುದು ಅಸಾಧ್ಯ. ಹಾಗಾಗಿ ತಾರಸಿಯನ್ನೇ ಆರೋಗ್ಯಕರ ತರಕಾರಿಗಳನ್ನು ಬೆಳೆಯಲು ಬಳಸಬಹುದು.
ಅಡುಗೆ ಮನೆ ತ್ಯಾಜ್ಯದ ಪರಿಣಾಮಕಾರಿ ನಿರ್ವಹಣೆಯು ಸಾವಯವ ವಿಧಾನದಲ್ಲಿ ಕೈ ತೋಟವನ್ನು ಬೆಳೆಸುವ ಪ್ರಯೋಜನಗಳಲ್ಲಿ ಒಂದಾಗಿದೆ.
ಜೂನ್ 2020 ರ ಲಾಕ್ಡೌನ್ ಸಮಯದಲ್ಲಿ ಛಾವಣಿಯ ತೋಟಗಾರಿತಾರಸಿ ತೋಟದ ಐಡಿಯಾ ಬಂದಿತು. ಬೆಳೆ ಬೆಳೆಯುವ ಉತ್ಸಾಹದಿಂದ ಕೃಷಿ ಪದವೀಧರನಾಗಿದ್ದ ನಾನು ಲಾಕ್ಡೌನ್ ಅವಧಿಯಲ್ಲಿ ನನ್ನ ಮನೆಯ ತಾರಸಿಯಲ್ಲಿ ತರಕಾರಿಗಳನ್ನು ಬೆಳೆಸಲಾರಂಭಿಸಿದೆ. ಸಣ್ಣ ಪ್ರಮಾಣದಲ್ಲಿ ಆರಂಭಿಸಿ ಕ್ರಮೇಣ ವಿಸ್ತರಿಸಿದೆ.
ತಾರಸಿ ತೋಟ ಸ್ಥಾಪನೆ
ತಾರಸಿ ತೋಟವನ್ನು ಸ್ಥಾಪಿಸಲು ನಾವು ಲಭ್ಯವಿರುವ ಸ್ಥಳ, ಬಳಸಬೇಕಾದ ಕುಂಡಗಳು, ಬೆಳೆಸಬೇಕಾದ ಸಸ್ಯಗಳು, ನೀರಿನ ಲಭ್ಯತೆ ಮುಂತಾದ ಹಲವಾರು ಮಾನದಂಡಗಳನ್ನು ಪರಿಗಣಿಸಿದ್ದೇವೆ. ತಾರಸಿ ತೋಟಗಾರಿಕೆಗೆ ಲಭ್ಯವಿರುವ ಸ್ಥಳವನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಂತ ಮುಖ್ಯ. ಏಕೆಂದರೆ ನಿರ್ದಿಷ್ಟ ಸ್ಥಳದಲ್ಲಿ ಇಡಬಹುದಾದ ಕುಂಡಗಳ ಸಂಖ್ಯೆಯನ್ನು ಯೋಜಿಸಲು ಇದು ಸಹಾಯ ಮಾಡುತ್ತದೆ. ಸಸ್ಯಗಳಿಗೆ ಸಾಕಷ್ಟು ಸೂರ್ಯನ ಬೆಳಕು ಮತ್ತು ನೀರು ಸಿಗುವ ರೀತಿಯಲ್ಲಿ ಜಾಗವನ್ನು ಆಯ್ಕೆ ಮಾಡಿಕೊಳ್ಳಬೇಕು.
ಆಮೇಲೆ, ತಾರಸಿಯಲ್ಲಿ ಯಾವ ಬೆಳೆ ಬೆಳೆಯುವುದೆಂದು ಮಾಧ್ಯಮಗಳಲ್ಲಿ ಹುಡುಕಾಡಿದೆವು. ತಾರಸಿ ತೋಟಗಾರಿಕೆಗೆ ಮಾರುಕಟ್ಟೆಯಲ್ಲಿ ಹಲವಾರು ಕಂಟೈನರ್ಗಳು ಲಭ್ಯವಿವೆ. ಇದು ಸಾಮಾನ್ಯವಾಗಿ ಯಾವ ತರಕಾರಿ ಎನ್ನುವುದನ್ನು ಅವಲಂಭಿಸಿದೆ. 24 cm X 24 cm X 30 cm (LXBXH) ಮತ್ತು 150 ಮೈಕ್ರಾನ್ ಮತ್ತು 600 ಗೇಜ್ ದಪ್ಪವಿರುವ ಹಗುರವಾದ UV ಸ್ಥಿರೀಕರಿಸಿದ LDPE ಬ್ಯಾಗ್ಗಳನ್ನು ಆಯ್ಕೆ ಮಾಡಿಕೊಂಡೆವು. ಇದು ಹೆಚ್ಚಿನ ತರಕಾರಿ ಬೆಳೆಗಳಿಗೆ ಸೂಕ್ತವಾಗಿದೆ. ಇದರಲ್ಲಿ 18 ಕೆಜಿ ವರೆಗೆ ಪಾಟಿಂಗ್ ಮಿಶ್ರಣವನ್ನು ಹಾಕಬಹುದು. ಇದು 4-5 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಇದರ ಬೆಲೆ ಕೂಡ ಕೈಗೆಟುಕುವಂತಿದೆ.
ಅಗತ್ಯ ಪೋಷಕಾಂಶಗಳನ್ನು ಒದಗಿಸಲು ಚೀಲದಲ್ಲಿ 1: 1: 1 ಅನುಪಾತದಲ್ಲಿ ಮಣ್ಣು, ಕೋಕೋ ಪೀಟ್ ಮತ್ತು ಕಾಂಪೋಸ್ಟ್ನಿಂದ ತುಂಬಿಸಲಾಯಿತು. ಮಣ್ಣಿನಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಇದಕ್ಕೆ ಟ್ರೈಕೋಡರ್ಮಾ 1ಕೆಜಿ/100ಕೆಜಿ ಮಿಶ್ರಣವನ್ನು ಸೇರಿಸಲಾಯಿತು. ಮಿಶ್ರಣವನ್ನು ಚೀಲದ 2/3 ರಷ್ಟು ತುಂಬಿಸಲಾಗುತ್ತದೆ.
ಮನೆ ಬಳಕೆಗೆ ನಿಯಮಿತವಾಗಿ ವೈವಿಧ್ಯಮಯ ತರಕಾರಿಗಳನ್ನು ಪಡೆಯಲು, ಬಿತ್ತನೆಯ ಸಮಯದಲ್ಲಿ ವಿವರವಾದ ಯೋಜನೆಯನ್ನು ರೂಪಿಸಿಕೊಳ್ಳಲಾಯಿತು. ತರಕಾರಿಗಳ ಆಯ್ಕೆಯು ಚಾಲ್ತಿಯಲ್ಲಿರುವ ಋತುವಿನ ಆಧಾರದ ಮೇಲೆ ಅದರ ಇಳುವರಿ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಬೆಳೆಗಳು ತ್ವರಿತವಾಗಿ ಬೆಳೆಯುವ ಸಾಮರ್ಥ್ಯವನ್ನು ಆಧರಿಸಿದೆ. ಇದರಿಂದಾಗಿ ಶೀಘ್ರದಲ್ಲೇ ಕೊಯ್ಲು ಮಾಡಬಹುದು. ಬೀಜಗಳನ್ನು ಪ್ರಮಾಣೀಕೃತ ಕಂಪನಿಗಳು ಮತ್ತು IIHR ನಂತಹ ಸರ್ಕಾರಿ ಸಂಸ್ಥೆಗಳಿಂದ ಪಡೆಯಲಾಯಿತು. ಏಕೆಂದರೆ ಅವು ಉತ್ತಮ ಇಳುವರಿ ಸಾಮರ್ಥ್ಯವನ್ನು ಹೊಂದಿರುವ ಗುಣಮಟ್ಟದ ಬೀಜಗಳನ್ನು ಪೂರೈಸುತ್ತವೆ.
ಚೌಕ 1: ವಿವಿಧ ಋತುಗಳ ತರಕಾರಿಗಳ ಪಟ್ಟಿ
|
60 ಚೀಲಗಳಲ್ಲಿ ಹಲವಾರು ವೈವಿಧ್ಯಮಯ ತರಕಾರಿ ತಳಿಗಳನ್ನು ಬೆಳೆಸಲಾಯಿತು. ನಾಲ್ಕೈದು ಸದಸ್ಯರಿರುವ ಚಿಕ್ಕ ಕುಟುಂಬಕ್ಕೆ ತರಕಾರಿಗಳನ್ನು ಉತ್ಪಾದಿಸಲು ಸುಮಾರು 50-60 ಗ್ರೋ ಬ್ಯಾಗ್ಗಳು ಸಾಕಾಗುತ್ತದೆ. ಹುರಳಿ ಕಾಯಿ; ಸೋರೆ/ಹೀರೆ ಕಾಯಿಗಳಂತಹ ಬಳ್ಳಿಗಳನ್ನು ಮೂಲೆಗಳಲ್ಲಿ ಇರಿಸಲಾಗಿತ್ತು. ಇದರಿಂದ ಅವುಗಳಿಗೆ ಹಬ್ಬಿಕೊಳ್ಳಲು ಉತ್ತಮ ಆಧಾರ ಸಿಗುತ್ತದೆ. ಉಳಿದ ಚೀಲಗಳನ್ನು ಬಿಸಿಲಿನ ಅಗತ್ಯತೆಯ ಆಧಾರದ ಮೇಲೆ ಇರಿಸಲಾಯಿತು (ಪೂರ್ಣ ಬಿಸಿಲು, ಭಾಗಶಃ ನೆರಳು ಮತ್ತು ತಂಪಾದ ಸ್ಥಳ). ದ್ವಿದಳ ಧಾನ್ಯಗಳಾದ ಅವರೆ, ಮೆಂತ್ಯೆ, ಬಟಾಣಿ ಇವುಗಳನ್ನು ತರಕಾರಿಗಳೊಂದಿಗೆ ಬೆಳೆಸುವುದರಿಂದ ಅವು ಮಣ್ಣಿನಲ್ಲಿ ಸಾರಜನಕ ಸ್ಥೀರಿಕರಣಕ್ಕೆ ನೆರವಾಗುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಕೋಷ್ಟಕ 1: ಮೊದಲ ವರ್ಷದ ತಾರಸಿ ತೋಟದ ಕೃಷಿ ವೆಚ್ಚ ಮತ್ತು ಒಟ್ಟು ಆದಾಯ (1ನೇ ಜೂನ್ 2020 ರಿಂದ 31 ಮೇ 2021)
ವೆಚ್ಚ | ಆದಾಯ | ||||
ವಿವರಗಳು | ವೆಚ್ಚ (ರೂ.) | ಪ್ರಮಾಣ | ಇಳುವರಿ (ಕೆಜಿ/ಕಟಾವು) | ದರ (ರೂ.) | ಆದಾಯ |
ಪಾಲಿಬ್ಯಾಗ್ | 1500/- | 60 | – | – | |
ಗೊಬ್ಬರ | 750/- | 300 | – | – | |
ಹಗ್ಗ ಕಟ್ಟು | 100/- | 1 | – | – | |
ಹ್ಯಾಂಡ್ ಸ್ಪ್ರೇಯರ್ | 200/- | 1 | – | – | |
ಜೈವಿಕಗೊಬ್ಬರ | 200/- | 2 | – | – | |
ಕೆಂಪು ಮಣ್ಣು | 500/- | 300 | – | – | |
ಕೊಕೊ ಪಿಟ್ | 900/- | 300 | – | – | |
ನೀರಾವರಿ | 800/- | 2 ದಿನ | – | – | |
ಕಳೆ | 800/- | 2 ದಿನ | – | – | |
ಎಲ್ಲ ಬೆಳೆಗಳ ಬೀಜಗಳು | |||||
1. ಹುರುಳಿ (ಪೋಲ್ + ಫ್ರೆಂಚ್) | 165/- | 300ಗ್ರಾಂ | 30ಕೆಜಿ | 60 | 1800/- |
2 ಕೊತ್ತಂಬರಿ | 30/- | 100 ಗ್ರಾಂ | 10 ಕಟಾವು | 25 | 250/- |
3. ಪಾಲಾಕ್ | 100/- | 500 ಗ್ರಾಂ | 25 ಕಟಾವು | 15 | 375/- |
4. ಅಮರಂತಸ್ | 150/- | 200 ಗ್ರಾಂ | 21 ಕಟಾವು | 10 | 210/- |
5. ರಾಜಗಿರಿ | 70/- | 100 ಗ್ರಾಂ | 22 ಕಟಾವು | 15 | 330/- |
6. ಮೆಂತ್ಯೆ | 60/- | 250 ಗ್ರಾಂ | 20 ಕಟಾವು | 20 | 400/- |
7. ಟೊಮೊಟೊ | 260/- | 10 ಗ್ರಾಂ | 20 ಕೆಜಿ | 30 | 600/- |
8. ಪುದೀನ | 10/- | 10 ಗ್ರಾಂ | 10 ಕಟಾವು | 10 | 100/- |
9. ಬೆಂಡೆಕಾಯಿ | 48/- | 150 ಗ್ರಾಂ | 12 ಕೆಜಿ | 45 | 540/- |
10. ಚಪ್ಪರದವರೆ | 20/- | 100 ಗ್ರಾಂ | 6 ಕೆಜಿ | 100 | 600/- |
11. ಈರುಳ್ಳಿ | 60/- | 25 ಗ್ರಾಂ | 5 ಕೆಜಿ | 50 | 250/- |
12 ಬದನೆ | 200/- | 25 ಗ್ರಾಂ | 15 ಕೆಜಿ | 40 | 600/- |
13. ಸಬ್ಸಿಗೆ ಸೊಪ್ಪು | 200/- | 200 ಗ್ರಾಂ | 10 ಕಟಾವು | 15 | 150/- |
14. ಮೂಲಂಗಿ | 50/- | 50 ಗ್ರಾಂ | 20*20 | 400/- | |
15. ಗಡ್ಡೆಕೋಸು | 50/- | 50 ಗ್ರಾಂ | 15*45 | 675/- | |
16. ಮೆಣಸಿನಕಾಯಿ | 100/- | 25 ಗ್ರಾಂ | 30kg*40 | 1200/- | |
ಒಟ್ಟು | 5223/- | 8480/- |
ವೈವಿಧ್ಯಮಯ ಬೆಳೆಗಳನ್ನು ಈ ರೀತಿಯಲ್ಲಿ ಬೆಳೆಯಲಾಯಿತು.
- ಋತುವಿಗೆ ಅನುಗುಣವಾಗಿ ಪಾಲಾಕ್, ಅಮರಂಥಸ್, ಕೊತ್ತಂಬರಿ, ಮೆಂತ್ಯ, ಪುದೀನಾ, ರಾಜಗಿರಿ ಇತ್ಯಾದಿಗಳನ್ನು ಒಳಗೊಂಡಂತೆ ಸೊಪ್ಪಿನ ತರಕಾರಿಗಳಿಗೆ 15 ಚೀಲಗಳನ್ನು ಬಳಸಲಾಗುತ್ತದೆ.
- 20 ಚೀಲಗಳನ್ನು ಬೆಂಡೆ, ಬದನೆ, ಟೊಮೊಟೊ, ಮೆಣಸಿನಕಾಯಿ ಬೆಳೆಯಲು ಬಳಸಲಾಗುತ್ತದೆ (ಪ್ರತಿಯೊಂದಕ್ಕೆ 5 ಚೀಲಗಳು).
- 10 ಚೀಲಗಳು ಪೋಲ್ ಹಾಗೂ ಫ್ರೆಂಚ್ ಹುರಳಿಕಾಯಿ ಬೆಳೆಯಲು
- 2 ಚೀಲಗಳು ಚಪ್ಪರದವರೆ ಬೆಳೆಯಲು
- 8 ಚೀಲಗಳು ಮೂಲಂಗಿ, ಗಡ್ಡೆಕೋಸು ಬೆಳೆಯಲು
- 5 ಚೀಲಗಳು ಈರುಳ್ಳಿ ಬೆಳೆಯಲು
ಬೆಳೆ ಆರೈಕೆ
ಪ್ರತಿ ಮನೆಯಲ್ಲೂ ಅಡುಗೆಮನೆಯಲ್ಲಿ ಪ್ರತಿದಿನ ಸಾವಯವ ತ್ಯಾಜ್ಯವನ್ನು ಉತ್ಪಾದನೆಯಾಗುತ್ತದೆ. ಅದು ಅಡುಗೆಮನೆಯ ತ್ಯಾಜ್ಯ, ಒಣಗಿದ ಎಲೆಗಳು ಮತ್ತು ಅವಶೇಷಗಳಾಗಿರಬಹುದು. ಈ ತ್ಯಾಜ್ಯಗಳನ್ನು ಸಮರ್ಥವಾಗಿ ಮರುಬಳಕೆ ಮಾಡಬಹುದು. ಈ ತ್ಯಾಜ್ಯಗಳನ್ನು ಸಮರ್ಥವಾಗಿ ಮರುಬಳಕೆ ಮಾಡಬಹುದು. ಇದನ್ನು ಎರೆಹುಳುಗಳಿಗೆ ಆಹಾರವಾಗಿ ನೀಡುವ ಮೂಲಕ ಎರೆಹುಳು ಗೊಬ್ಬರ ತಯಾರಿಸಬಹುದು. ಅಲ್ಲದೆ, ಈ ಅಡುಗೆ ತ್ಯಾಜ್ಯವು ಮೆಣಸಿನಕಾಯಿ, ಬಿಳಿಬದನೆ, ಟೊಮ್ಯಾಟೊ ಮತ್ತು ಬೆಂಡೆಕಾಯಿಗಳಿಗೆ ಮುಚ್ಚಿಗೆಯಾಗಿಯೂ ಕಾರ್ಯನಿರ್ವಹಿಸುತ್ತದೆ. ಈ ಗಿಡಗಳಿಗೆ ಹೊದಿಕೆಯಾಗಿ ದೈನಂದಿನ ತ್ಯಾಜ್ಯವನ್ನು ಸುರಿಯಲಾಗುತ್ತದೆ. ಭಾಗಶಃ ಕೊಳೆತ ನಂತರ, ಈ ತ್ಯಾಜ್ಯವನ್ನು ಹಸುವಿನ ಸಗಣಿ ಹಾಕಿರುವ ಎರೆಹುಳು ತೊಟ್ಟಿಯಲ್ಲಿ ತುಂಬಿಸಲಾಗುತ್ತದೆ. ಇದು ಹುಳುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಈ ತೊಟ್ಟಿಯನ್ನು ಮಳೆನೀರು ಬೀಳದಂತೆ ನೆರಳಿರುವ ಪ್ರದೇಶದಲ್ಲಿ ಇಡಬೇಕು. 2-3 ತಿಂಗಳ ನಂತರ ಈ ತೊಟ್ಟಿಯನ್ನು ಖಾಲಿಮಾಡಿ ಈ ಗೊಬ್ಬರವನ್ನು ಬಳಸಲಾಗುತ್ತದೆ. ಅಲ್ಲದೆ, ವರ್ಮಿವಾಶ್, ಎನ್ನುವ ದ್ರವ ಗೊಬ್ಬರವನ್ನು ತೊಟ್ಟಿಯ ಔಟ್ಲೆಟ್ನಿಂದ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಶೇ 10% ಗಿಡಗಳಿಗೆ ಸಿಂಪಡಿಸಲು ಬಳಸಲಾಗುತ್ತದೆ. ಇದು ಗಿಡಗಳಿಗೆ ಪೋಷಕಾಂಶಗಳನ್ನು ಪೂರೈಸುವುದರ ಜೊತೆಗೆ ಬೆಳವಣಿಗೆಯ ಪ್ರವರ್ತಕವಾಗಿ ಕಾರ್ಯನಿರ್ವಹಿಸುತ್ತದೆ.
ಎರೆಹುಳು ಗೊಬ್ಬರದ ಜೊತೆಗೆ, ಪ್ರತಿ ಬೆಳೆಯ ನಂತರ ಹೊಲಗೊಬ್ಬರ ಮತ್ತು ಕಾಂಪೋಸ್ಟ್ ಅನ್ನು ಬಳಸಬಹುದು. ಬೂದಿಯು ತೋಟಕ್ಕೆ ಸುಣ್ಣ ಮತ್ತು ಪೊಟ್ಯಾಶ್ನ ಅತ್ಯುತ್ತಮ ಮೂಲವಾಗಿದೆ. ಇದನ್ನು ಸಣ್ಣ ಪ್ರಮಾಣದಲ್ಲಿ ಮಿಶ್ರಗೊಬ್ಬರದೊಂದಿಗೆ ಬೆರೆಸಿ, ಬೆಳೆಯುತ್ತಿರುವ ಬೆಳೆಗಳಿಗೆ ಅನ್ವಯಿಸಲಾಗುತ್ತದೆ.
ತಾರಸಿ ತೋಟದಲ್ಲಿ, ನಾವು ಯಾವಾಗಲೂ ಸಾವಯವ ಒಳಹರಿವಿನ ಮೇಲೆ ಅವಲಂಬಿತರಾಗಿದ್ದೇವೆ. ಕೀಟ ಮತ್ತು ರೋಗವು ಸಾಮಾನ್ಯವಾದ ವಿಷಯ. ಆದಾಗ್ಯೂ, ಸಸ್ಯ ವೈವಿಧ್ಯತೆಯಿಂದಾಗಿ, ಕೀಟ ಮತ್ತು ರೋಗ ಹಾನಿಯ ಪ್ರಮಾಣವು ಕಡಿಮೆ ಇರುತ್ತದೆ. ಬೆಳೆಯ ವೈವಿಧ್ಯತೆಯಿಂದಾಗಿ ಕೀಟ, ರೋಗಬಾಧೆಯು ಕಡಿಮೆ. ಉದಾಹರಣೆಗೆ ಮೆಣಸಿನಕಾಯಿ ಗಿಡದ ಎಲೆಸುರಳಿ ಸಮಸ್ಯೆ, ಹುರುಳಿಗೆ ತಗಲುವ ಬಿಳಿನೊಣ ಸಮಸ್ಯೆಯನ್ನು ಸಸ್ಯಜನ್ಯ ಔಷಧಿಗಳ ಬಳಕೆ (ಚೌಕ 2) ಮತ್ತು ಪರಭಕ್ಷಕ ಹಾಗೂ ಪರಾವಲಂಭಿ ಕೀಟ, ರೋಗಗಳ ನೈಸರ್ಗಿಕ ನಿಯಂತ್ರಣವನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ. ಆಯಾ ಕಾಲಕ್ಕೆ ತಕ್ಕಂತಹ ತರಕಾರಿಗಳನ್ನು ಬಿತ್ತನೆ ಮಾಡುವುದರಿಂದ ಕೀಟಗಳ ದಾಳಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನಾವು ಯಾವುದೇ ಕೀಟನಾಶಕಗಳನ್ನು ಬಳಸುವುದಿಲ್ಲ.
ಕೊಯ್ಲಿನ ಲಾಭಗಳು
ಬಿತ್ತನೆಯ ಕುರಿತಾಗಿ ಯೋಜನೆಯನ್ನು ರೂಪಿಸಿಕೊಂಡಿದ್ದರಿಂದ ದೀರ್ಘಕಾಲದವರೆಗೆ ತರಕಾರಿ ಕೊಯ್ಲು ಸಾಧ್ಯವಾಯಿತು. ನನ್ನ ತಾರಸಿ ತೋಟವು ವಿವಿಧ ತರಕಾರಿ ಬೆಳೆಗಳೊಂದಿಗೆ ವೈವಿಧ್ಯಮಯವಾಗಿದೆ ಉದಾಹರಣೆಗೆ: ಎಲ್ಲಾ ಸೊಪ್ಪಿನ ತರಕಾರಿಗಳು 30 ದಿನಗಳಿಗೊಮ್ಮೆ ಕೊಯ್ಲಿಗೆ ಬರುತ್ತದೆ. ಅದನ್ನು ಕೊಯ್ಲು ಮಾಡಿದ ನಂತರ ಮುಂದಿನ ಕಟಾವು 15 ದಿನಗಳಲ್ಲಿ ಬರುತ್ತದೆ. ಹುರಳಿಕಾಯಿ 50 ದಿನಗಳ ನಂತರ ಫಲ ನೀಡಲು ಆರಂಭಿಸುತ್ತದೆ. 2-3 ದಿನಗಳ ಮಧ್ಯಂತರದಲ್ಲಿ ಕೊಯ್ಲು ಮಾಡಲಾಗುತ್ತದೆ. ಇತರ ತರಕಾರಿಗಳು ಅದರ ಅವಧಿಯನ್ನು ಆಧರಿಸಿ ಕೊಯ್ಲಿಗೆ ಬರುತ್ತವೆ. ಕನಿಷ್ಠ ಒಂದು ತಿಂಗಳವರೆಗೆ ನಿರಂತರವಾಗಿ ತರಕಾರಿಗಳ ಕೊಯ್ಲು ಇರುತ್ತದೆ.
ತೀವ್ರ ಆರೈಕೆಯಿಂದ ಇಳುವರಿ ಮಟ್ಟವು ತೋಟದಲ್ಲಿ ಬೆಳೆದ ಬೆಳೆಯಂತೆ ಉತ್ತಮವಾಗಿದೆ. ಅಲ್ಲದೆ, ತರಕಾರಿಗಳು ತಾಜಾ ಹಾಗೂ ಪೌಷ್ಟಿಕವಾಗಿದ್ದು, ಮಾರುಕಟ್ಟೆ ಉತ್ಪನ್ನಗಳಿಗೆ ಹೋಲಿಸಿದರೆ ಉತ್ತಮ ರುಚಿಯನ್ನು ಹೊಂದಿರುತ್ತವೆ. ಉತ್ಪಾದಿಸಿದ ತರಕಾರಿಗಳನ್ನು ಮನೆ ಬಳಕೆಗೆ ಬಳಸಲಾಗುತ್ತಿದೆ. ಹೆಚ್ಚುವರಿ ತರಕಾರಿಗಳನ್ನು ನೆರೆಹೊರೆಯವರಿಗೆ ಹಂಚಲಾಗುತ್ತದೆ.
ವೆಚ್ಚಗಳು ಮತ್ತು ಆದಾಯವನ್ನು ಅಂದಾಜಿಸಲಾಗಿದೆ. ತಾರಸಿ ತೋಟವನ್ನು ರೂಪಿಸಲು ಮತ್ತು ಒಂದು ವರ್ಷದ ಅವಧಿಯಲ್ಲಿ ಮೇಲ್ಛಾವಣಿಯಲ್ಲಿ ತರಕಾರಿಗಳನ್ನು ಉತ್ಪಾದಿಸಲು ತಗಲಿದ ಒಟ್ಟು ವೆಚ್ಚ ರೂ.5223. ಕೋಷ್ಟಕ 1 ರಲ್ಲಿ ತಾರಸಿ ತೋಟಕ್ಕೆ ತಗಲಿದ ವೆಚ್ಚಗಳ ವಿವರವನ್ನು ನೀಡಲಾಗಿದೆ. ಉತ್ಪಾದಿಸಿದ ತರಕಾರಿಗಳ ಮೌಲ್ಯ ರೂ.8480. ತಾರಸಿಯಲ್ಲಿ ತರಕಾರಿಗಳನ್ನು ಬೆಳೆಯುವುದು ಲಾಭದಾಯಕ ಉದ್ಯಮ ಎನ್ನುವುದನ್ನು ಇದು ಸಾಬೀತುಪಡಿಸುತ್ತದೆ.
ಚೌಕ 2: ಸಸ್ಯಜನ್ಯ ಔಷಧಿಗಳು – ಕೆಲವು ಉದಾಹರಣೆಗಳುಬೇವಿನ ಎಲೆ ಸಾರ: 250 ಗ್ರಾಂ ಬೇವಿನೆಲೆಯನ್ನು ಅರ್ಧ ಲೀಟರ್ ನೀರಿನಲ್ಲಿ ನೆನಸಿಡಬೇಕು. ಈ ಮಿಶ್ರಣದ ಪಾತ್ರೆಯ ಬಾಯನ್ನು ಬಟ್ಟೆಯಿಂದ ಮುಚ್ಚಿ ಮೂರು ದಿನಗಳವರೆಗೆ ಇಡಬೇಕು. ನಂತರ ಈ ದ್ರಾವಣವನ್ನು 10 ಬಾರಿ ಕೀಟನಾಶಕವಾಗಿ ಬಳಸಬಹುದು.ಹುಳಿ ಮಜ್ಜಿಗೆ: ಹುಳಿ ಮಜ್ಜಿಗೆಯನ್ನು ಸಿಂಪಡಿಸುವುದರಿಂದ ಗಿಡಗಳಿಗೆ ಬರುವ ಕೆಲವು ಶಿಲೀಂಧ್ರ ರೋಗಗಳನ್ನು ನಿಯಂತ್ರಿಸಬಹುದು.ಬೂದಿ: ಬದನೆ, ಸೋರೆ/ಹೀರೆಕಾಯಿ, ಬೆಂಡೆಕಾಯಿ ಗಿಡಗಳಿಗೆ ಬೂದಿಯನ್ನು ಹಾಕುವುದರಿಂದ ಸೈನಿಕಹುಳು, ಹೇನುಗಳು, ಸೌತೆಕಾಯಿ ಜೀರುಂಡೆ ಇತ್ಯಾದಿಗಳ ನಿಯಂತ್ರಣ ಮಾಡಬಹುದು. |
ತಾರಸಿ ತೋಟಗಾರಿಕೆಯು ಆರೋಗ್ಯದ ಮೇಲಾಗುವ ಅಡ್ಡ ಪರಿಣಾಮಗಳನ್ನು ಕಡಿಮೆ ಮಾಡುವುದು. ಬಿಡುವಿನ ವೇಳೆಯ ಸದ್ಬಳಕೆ, ಸ್ಥಳದ ಬಳಕೆ, ಆರೋಗ್ಯಕರ ಆಹಾರದ ಉತ್ಪಾದನೆಯಂತಹ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅಡುಗೆ ತ್ಯಾಜ್ಯದ ಪರಿಣಾಮಕಾರಿ ನಿರ್ವಹಣೆಯು ತಾರಸೊ ತೋಟಗಳನ್ನು ಸಾವಯವವಾಗಿ ಬೆಳೆಸುವ ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ. ಇದು ನಗರ ಪ್ರದೇಶಗಳಲ್ಲಿ ಕೆಲಸ ಮಾಡುವವರಿಗೆ ಸ್ಟ್ರೆಸ್ ಬಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ.
ತಾರಸಿ ತೋಟದಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆದ ನಂತರ, ನಾನು ಆರೋಗ್ಯಕರ ಜೀವನಕ್ಕಾಗಿ ತೋಟಗಾರಿಕೆಯನ್ನು ಅಭ್ಯಾಸ ಮಾಡಲು ನನ್ನ ಪ್ರದೇಶದ ಜನರಿಗೆ ತರಬೇತಿ ನೀಡಲು ಪ್ರಾರಂಭಿಸಿದೆ. ಭವಿಷ್ಯದಲ್ಲಿ, ನಾನು ಬೆಂಗಳೂರಿನಲ್ಲಿ ತಾರಸಿ ತೋಟಗಾರಿಕೆ ಸಲಹಾ ಸಂಸ್ಥೆಯನ್ನು ಪ್ರಾರಂಭಿಸಲು ಯೋಜಿಸುತ್ತೇನೆ.
ಕೃತಜ್ಞತೆಗಳು: ತೋಟವನ್ನು ಸ್ಥಾಪಿಸುವಲ್ಲಿ ಮತ್ತು ಈ ಲೇಖನವನ್ನು ಅಭಿವೃದ್ಧಿಪಡಿಸುವಲ್ಲಿ ಶ್ರೀ ಸಂತೋಷ ಕೆ ಎಂ ಅವರ ಬೆಂಬಲವನ್ನು ಲೇಖಕರು ಕೃತಜ್ಞತೆಯಿಂದ ಸ್ಮರಿಸುತ್ತಾರೆ.
ರುಂಡನ್ ವಿ
Rundan V
Ph.D. Scholar, Department of Agronomy
University of Agricultural Sciences, Dharwad.
E-mail: rundangowda10@gmail.com
ಆಂಗ್ಲ ಮೂಲ : ಲೀಸಾ ಇಂಡಿಯಾ; ಸಂಪುಟ :24; ಸಂಚಿಕೆ : 1 ; ಮಾರ್ಚ್ 2022